ಕಾಂಗ್ರೆಸ್‌ ನಾಯಕರನ್ನು ಸೆಳೆಯಲು ಬಿಜೆಪಿ ತಂತ್ರ: ಸಜ್ಜನ್‌ ಸಿಂಗ್‌ ಭೋಪಾಲ್‌: ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಕಾಂಗ್ರೆಸಿಗರನ್ನು ಸೆಳೆಯಲು ಬಿಜೆಪಿ ವರಿಷ್ಠರು ತಮ್ಮ ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ ಎಂದು ಕಾಂಗ್ರೆಸ್‌ ಶನಿವಾರ ಆರೋಪ ಮಾಡಿದೆ. ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಸಜ್ಜನ್‌ ಸಿಂಗ್‌ ವರ್ಮಾ ಅವರು ಪಕ್ಷದ ಕಾರ್ಯಕ್ರಮದಲ್ಲಿ ಈ ಆರೋಪ ಮಾಡಿದ್ದಾರೆ. ಸಜ್ಜನ್‌ ಸಿಂಗ್‌ ಭಾಷಣದ ವಿಡಿಯೊ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಕಾಂಗ್ರೆಸಿಗರನ್ನು ಸೆಳೆಯಲು ಬಿಜೆಪಿ ಏಜೆಂಟರನ್ನು ನೇಮಕ ಮಾಡಿದೆ ಎಂಬ ಮಾಹಿತಿ ಭಾಷಣದಲ್ಲಿ ಇದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ದೇವಾಸ್ನ ಮಾಜಿ ಸಂಸತ್ ಸದಸ್ಯ ಸಜ್ಜನ್ ಸಿಂಗ್ ವರ್ಮಾ ಅವರು ಶುಕ್ರವಾರ ರತ್ಲಾಮ್ನಲ್ಲಿ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ. ವರ್ಮಾ ಅವರು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಕಟ್ಟಾ ಬೆಂಬಲಿಗರು. ಇತ್ತೀಚೆಗೆ, ಕಮಲ್ ನಾಥ್ ಬಿಜೆಪಿಗೆ ಸೇರಲಿದ್ದಾರೆ ಎಂಬ ತೀವ್ರ ಊಹಾಪೋಹಗಳು ಹಬ್ಬಿದ್ದವು. ಅದೇ ಸಮಯದಲ್ಲಿ, ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ ಅವರು ಕಮಲ್ ನಾಥ್‌ಗೆ ತಮ್ಮ ಪಕ್ಷದ ಬಾಗಿಲು ಮುಚ್ಚಲಾಗಿದೆ ಎಂದು ಪ್ರತಿಪಾದಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.