ಪರಿಶಿಷ್ಟರಿಗೆ ಒಳಮೀಸಲಾತಿ: ಆ.1ರ ತೀರ್ಪು ಮರುಪರಿಶೀಲನೆ ಕೋರಿ ‘ಸುಪ್ರೀಂ’ಗೆ ಅರ್ಜಿ ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರಿಗೆ ಒಳಮೀಸಲಾತಿ ಕಲ್ಪಿಸುವ ಕುರಿತು ಆಗಸ್ಟ್‌ 1ರಂದು ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಮುಂಬೈನ ಜೈಶ್ರೀ ಲಕ್ಷ್ಮಣರಾವ್‌ ಪಾಟೀಲ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ‘ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳನ್ನು ಗುರುತಿಸುವ ವಿಶೇಷ ಅಧಿಕಾರವನ್ನು, ಸಂವಿಧಾನದ 341 ಹಾಗೂ 432ನೇ ವಿಧಿ ಅನ್ವಯ ರಾಷ್ಟ್ರಪತಿಗಳು ಮಾತ್ರ ಹೊಂದಿದ್ದಾರೆ’ ಎಂದು ಜೈಶ್ರೀ ಪಾಟೀಲ ಅರ್ಜಿಯಲ್ಲಿ ತಿಳಿಸಿದ್ದಾರೆ. ‘ಯಾವುದೇ ಸಮುದಾಯವು ಮುಂದುವರಿದಿದೆ ಅಥವಾ ಎಸ್‌ಸಿ/ಎಸ್‌ಟಿ ಪಟ್ಟಿಯಿಂದ ಹೊರಬಿದ್ದಿದೆ ಎಂದಾದಾಗ, ಅಂತಹ ಸಮುದಾಯಗಳನ್ನು ಪಟ್ಟಿಯಿಂದ ಹೊರಗಿಡುವ ಇಲ್ಲವೇ ಪಟ್ಟಿಗೆ ಸೇರಿಸುವ ಅಧಿಕಾರವನ್ನು 1950ರಲ್ಲಿ ಹೊರಡಿಸಿರುವ ಆದೇಶವು ಸಂಸತ್‌ಗೆ ಮಾತ್ರ ನೀಡಿದೆ. ಈ ವಿಷಯವನ್ನು ಸಮವರ್ತಿ ಪಟ್ಟಿಯಲ್ಲಿ ಸೇರಿಸುವ ಕುರಿತು ರಾಜ್ಯಗಳಿಂದಲೂ ಪರ್ಯಾಲೋಚನೆ ನಡೆದಿಲ್ಲ’ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ‘ಕೆನೆಪದರದವರನ್ನು ಎಸ್‌ಟಿ, ಎಸ್‌ಟಿ ಪಟ್ಟಿಯಿಂದ ಹೊರಗಿಡುವುದಕ್ಕೆ ನೀಡುವ ಯಾವುದೇ ನಿರ್ದೇಶನವು ಕಾನೂನುಬಾಹಿರವಾಗುತ್ತದೆ. ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೂ ವಿರುದ್ಧವಾಗಲಿದೆ’ ಎಂದು ಜೈಶ್ರೀ ಪಾಟೀಲ ಅರ್ಜಿಯಲ್ಲಿ ವಿವರಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.