: ಮರಕ್ಕೆ ರಾಖಿ ಕಟ್ಟಿದ ಬಿಹಾರ ಸಿಎಂ ನಿತೀಶ್ ಕುಮಾರ್ ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು 'ರಕ್ಷಾ ಬಂಧನ' ಸಂಭ್ರಮದ ಪ್ರಯುಕ್ತ ಮರಕ್ಕೆ ರಾಖಿ ಕಟ್ಟಿದ್ದಾರೆ. ಆ ಮೂಲಕ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿನ 'ರಾಜಧಾನಿ ವಾಟಿಕಾ' ಉದ್ಯಾನಕ್ಕೆ ಭೇಟಿ ನೀಡಿದ ನಿತೀಶ್‌, ಗಿಡ ನೆಟ್ಟು ನೀರೆರೆದಿದ್ದಾರೆ. ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್‌ ಚೌಧರಿ ಮತ್ತು ವಿಜಯ್‌ ಕುಮಾರ್‌ ಸಿನ್ಹಾ ಅವರು ಸಿಎಂ ಅವರೊಂದಿಗೆ ಇದ್ದರು. 'ಅರಣ್ಯ ಹಾಗೂ ಪರಿಸರ ಸಂರಕ್ಷಣೆಗೆ ಒತ್ತು ನೀಡಿರುವ ರಾಜ್ಯ ಸರ್ಕಾರವು ರಕ್ಷಾ ಬಂಧನ ದಿನವನ್ನು 2012ರಿಂದ 'ಬಿಹಾರ ವೃಕ್ಷ ಸುರಕ್ಷಾ ದಿನ'ವನ್ನಾಗಿ ಆಚರಿಸುತ್ತಿದೆ' ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. 'ಪರಿಸರವನ್ನು ಕಾಪಾಡುವ ಸಲುವಾಗಿ, ನಾವೆಲ್ಲ ಗಿಡಗಳನ್ನು ನೆಟ್ಟು ಪೋಷಿಸಬೇಕು. ರಾಜ್ಯ ಸರ್ಕಾರವು ಜಲ ಜೀವನ್‌ ಹರಿಯಾಲಿ (ಹಸಿರು) ಮಿಷನ್‌ ಅಡಿಯಲ್ಲಿ ಗಿಡ ನೆಡುವುದಕ್ಕೆ ಒತ್ತು ನೀಡುತ್ತಿದೆ. ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮಕ್ಕೂ ಸರ್ಕಾರ ಉತ್ತೇಜನ ನೀಡುತ್ತಿದೆ' ಎಂದೂ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.