ಜಮ್ಮು: ಉಗ್ರರ ದಾಳಿಯಲ್ಲಿ ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಹುತಾತ್ಮ ಶ್ರೀನಗರ: ಜಮ್ಮುವಿನ ಉಧಮ್‌ಪುರ ಜಿಲ್ಲೆಯಲ್ಲಿ ಸೇನಾ ಗಸ್ತು ಪಡೆ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್‌ ಹುತಾತ್ಮರಾಗಿದ್ದಾರೆ. ಬಸಂತ್‌ಗಢದ ದುಡು ಪ್ರದೇಶದಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ಸಿಆರ್‌ಪಿಎಫ್ ಯೋಧರು ಮತ್ತು ಸ್ಥಳೀಯ ಪೊಲೀಸರ ವಿಶೇಷ ಕಾರ್ಯಾಚರಣಾ ತಂಡದ(ಎಸ್‌ಒಜಿ) ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ(ಸಿಆರ್‌ಪಿಎಫ್) 187ನೇ ಬೆಟಾಲಿಯನ್‌ನ ಇನ್ಸ್‌ಪೆಕ್ಟರ್ ಕುಲದೀಪ್ ಕುಮಾರ್ ಅವರಿಗೆ ಗುಂಡು ತಗುಲಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಉಳಿಯಲಿಲ್ಲ ಎಂದು ಹೇಳಿದ್ದಾರೆ. ದುಡು ಪ್ರದೇಶದ ಚಿಲ್ಲಿ ಗ್ರಾಮದ ಬಳಿ ಸಿಆರ್‌ಪಿಎಫ್ ಹಾಗೂ ಪೊಲೀಸ್‌ನ ಜಂಟಿ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಇನ್ಸ್‌ಪೆಕ್ಟರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾ ಕೇಂದ್ರಕ್ಕೆ ತರಲಾಗಿದೆ. ಉಗ್ರರ ದಾಳಿಗೆ ಪ್ರತಿಯಾಗಿ ಪೊಲೀಸ್ ಮತ್ತು ಸಿಆರ್‌ಪಿಎಫ್ ಯೋಧರು ಪ್ರಬಲ ಪ್ರತಿ ದಾಳಿ ನಡೆಸಿದ್ದು, ಉಗ್ರರು ಸ್ಥಳದಿಂದ ಓಡಿಹೋಗಿದ್ದಾರೆ. ಉಗ್ರರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದೂ ವಕ್ತಾರರು ತಿಳಿಸಿದ್ದಾರೆ. ಬಂಸತ್‌ಗಢ ಅರಣ್ಯ ಪ್ರದೇಶದಲ್ಲಿ ಏಪ್ರಿಲ್‌ನಿಂದ ಕೆಲವು ಭಯೋತ್ಪಾದಕರ ಚಟುವಟಿಕೆಗಳ ವರದಿಗಳು ಆಗಿವೆ. ಇಲ್ಲಿನ ಗ್ರಾಮವೊಂದರ ಭದ್ರತಾ ಸಿಬ್ಬಂದಿ ಉಗ್ರರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದರು. ದೋಡಾ ಜಿಲ್ಲೆಯಲ್ಲಿ ಉಗ್ರರ ಜೊತೆಗಿನ ಹೋರಾಟದಲ್ಲಿ ಸೇನೆಯ ಕ್ಯಾಪ್ಟನ್ ಹುತಾತ್ಮರಾಗಿ 5ನೇ ದಿನಕ್ಕೆ ಮತ್ತೆ ಉಗ್ರರ ಉಪಟಳ ಶುರುವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಬಾಲಿವುಡ್ ನಟಿ, ‘ಕಲ್ಕಿ’ ಖ್ಯಾತಿಯ ದಿ ಶಾ ಪಟಾನಿ ಚೆಂದದ ಚಿತ್ರಗಳ ಮೂಲಕ ಅಭಿಮಾನಿಗಳನ್ನು ಸೆಳೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.