| ಕುಕಿಗಳ ವಲಸೆ ಬಗ್ಗೆ ದೋಷ: ಕರಡು ಹಿಂಪಡೆದ ಎನ್‌ಇಸಿ ಇಂಫಾಲ್: ‘ಕುಕಿ ಸಮುದಾಯದ ಜನರು ನೆರೆಯ ಮ್ಯಾನ್ಮಾರ್‌ನ ‘ಚಿನ್‌’ ರಾಜ್ಯದಿಂದ ಮಣಿಪುರಕ್ಕೆ ವಲಸೆ ಬಂದವರು’ ಎಂದು ತಪ್ಪಾಗಿ ಉಲ್ಲೇಖಿಸಿದ್ದಕ್ಕಾಗಿ ಈಶಾನ್ಯ ಮಂಡಳಿಯು (ಎನ್ಇಸಿ) ತಾನು ಬಿಡುಗಡೆ ಮಾಡಿದ್ದ ‘2047ರ ಗುರಿ’ ಕರಡನ್ನು ಹಿಂಪಡೆದಿದೆ ಎಂದು ಮುಖ್ಯಮಂತ್ರಿ ಎನ್‌. ಬಿರೇನ್ ಸಿಂಗ್ ತಿಳಿಸಿದ್ದಾರೆ. ಕರಡು ದಾಖಲೆಯಲ್ಲಿ ‘ಈಶಾನ್ಯ ಪ್ರದೇಶದ ಬುಡಕಟ್ಟು ಸಮುದಾಯಗಳ ವಲಸೆ’ ವಿಷಯದ ಕುರಿತ ಮೂರನೇ ಅಧ್ಯಾಯದಲ್ಲಿ ಈ ತಪ್ಪು ಮಾಹಿತಿ ಉಲ್ಲೇಖವಾಗಿದೆ. ಈ ಬಗ್ಗೆ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಬಿರೇನ್‌ ಸಿಂಗ್‌ ‘ಎನ್‌ಇಸಿಯ 2047ರ ವೇಳೆಗೆ ಅಭಿವೃದ್ಧಿಯ ಗುರಿ ಕುರಿತು ಯೋಜನೆಗಳ ದಾಖಲೆಯಲ್ಲಿ ದೋಷ ಪತ್ತೆಯಾಗಿರುವ ಕುರಿತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಲ್ಲಿ ಪ್ರಸ್ತಾಪಿಸಲಾಗಿದೆ. ಸದ್ಯ ಕರಡನ್ನು ಹಿಂಪಡೆಯಲಾಗಿದೆ’ ಎಂದು ಹೇಳಿದರು. ಮ್ಯಾನ್ಮಾರ್‌ನ ಚಿನ್‌, ಮಣಿಪುರ ಮತ್ತು ಮಿಜೊರಾಂ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.