ಹೆದ್ದಾರಿಯಲ್ಲಿ ವಾಯುಪಡೆ ವಿಮಾನಗಳನ್ನು ತುರ್ತು ಇಳಿಸುವ ಪ್ರಯೋಗ ಯಶಸ್ವಿ ಬಪಾಟ್ಲ : ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಮಾನವನ್ನು ಇಳಿಸುವ ಪ್ರಯೋಗವನ್ನು ಭಾರತೀಯ ವಾಯುಪಡೆಯು ಯಶಸ್ವಿಯಾಗಿ ನಡೆಸಿದೆ. ಸೋಮವಾರ ಆಂಧ್ರ ಪ್ರದೇಶದ ಪುಚಿಕಲಗುಡಿಪಡು ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ– 16ರಲ್ಲಿ ಎಎನ್‌– 32 ಮತ್ತು ಡಾರ್ನಿಯರ್‌ ಎಂಬ ಎರಡು ಸಾರಿಗೆ ವಿಮಾನಗಳನ್ನು ಯಶಸ್ವಿಯಾಗಿ ಲ್ಯಾಂಡ್‌ ಮಾಡುವ ಮೂಲಕ ಈ ಪ್ರಯೋಗ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾನೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗಿನ ಎರಡು ತಾಸಿನಲ್ಲಿ ಎರಡೂ ವಿಮಾನಗಳನ್ನು ಇಳಿಸಲಾಗಿದೆ. ಈ ಅವಧಿಯಲ್ಲಿ ಸುಖೋಯ್‌ ಎಸ್‌ಯು– 30 ಸೇರಿದಂತೆ ವಿವಿಧ ಯುದ್ಧ ವಿಮಾನಗಳೂ ಹಾರಾಟ ನಡೆಸಿದವು. ಹಾಗಿದ್ದರೂ ಅವುಗಳು ಸ್ಥಳದಲ್ಲಿ ಇಳಿದಿಲ್ಲ. ಈ ಪ್ರಯೋಗಕ್ಕಾಗಿ ಮುಂಜಾನೆ 7.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಭವಿಷ್ಯದಲ್ಲಿ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ವಾಯುಪಡೆಯ ತುರ್ತು ಸನ್ನದ್ಧತೆಯನ್ನು ಹೆಚ್ಚಿಸುವ ಭಾಗವಾಗಿ ಈ ಪ್ರಯೋಗ ನಡೆಸಲಾಗಿದೆ. ಯುದ್ಧದ ಸಂದರ್ಭದಲ್ಲಿ ವಿಮಾನವನ್ನು ತುರ್ತು ಇಳಿಸಲು ವಾಯುಪಡೆಗೆ ರಾಷ್ಟ್ರೀಯ ಹೆದ್ದಾರಿ– 16ರಲ್ಲಿ 4.1 ಕಿ.ಮೀ ಉದ್ದದ ಮಾರ್ಗದ ತುರ್ತು ಇಳಿಕೆ ಸೌಲಭ್ಯವಿರುತ್ತದೆ ಎಂದು ಸ್ಥಳೀಯ ಎಸ್‌ಪಿ ವಿಕುಲ್‌ ಜಿಂದಾಲ್‌ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.