ಮಹಾರಾಷ್ಟ್ರದ ಗಡ್‍ಚಿರೋಲಿಯಲ್ಲಿ ಎನ್‌ಕೌಂಟರ್‌: ನಾಲ್ವರು ನಕ್ಸಲರ ಹತ್ಯೆ ಮುಂಬೈ: ಗುಪ್ತಚರ ಮಾಹಿತಿ ಆಧರಿಸಿ ಮಹಾರಾಷ್ಟ್ರದ ಗಡ್‍ಚಿರೋಲಿ ಜಿಲ್ಲೆಯಲ್ಲಿ ಮಂಗಳವಾರ ನಡೆದ ಪೊಲೀಸ್‌ ಮತ್ತು ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ನಾಲ್ವರು ನಕ್ಸಲರು ಹತರಾಗಿದ್ದಾರೆ. ಮಹಾರಾಷ್ಟ್ರ, ಛತ್ತೀಸಗಢ ಮತ್ತು ತೆಲಂಗಾಣದ ನಕ್ಸಲ್‌ ಬಾದಿತ ಪ್ರದೇಶಗಳಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ನಕ್ಸಲರು ಯೋಜಿಸಿದ್ದರು ಎಂದು ಗೊತ್ತಾಗಿದೆ. ಈ ನಾಲ್ವರ ಬಗ್ಗೆ ಮಾಹಿತಿ ನೀಡಿದವರಿಗೆ ಒಟ್ಟು ₹ 36 ಲಕ್ಷ ಬಹುಮಾನ ಘೋಷಣೆಯಾಗಿತ್ತು. ಮೃತರನ್ನು ಮಂಗಿ ಇಂದ್ರವೆಲ್ಲಿ ಪ್ರದೇಶದ ಕಾರ್ಯದರ್ಶಿ ವರ್ಗೀಶ್‌, ಸಿರ್ಪುರ ಚೆನ್ನೂರು ಪ್ರದೇಶ ಸಮಿತಿಯ ಕಾರ್ಯದರ್ಶಿ ಡಿ.ವಿ.ಸಿ.ಎಂ. ಮಾಗ್ತು, ಪ್ಲಟೂನ್‌ ಸದಸ್ಯರಾದ ಕುರ್ಸಂಗ್‌ ರಾಜು ಮತ್ತು ಕುಟುಮೆಟ್ಟ ವೆಂಕಟೇಶ್‌ ಎಂದು ಗುರುತಿಸಲಾಗಿದೆ. ಈ ನಾಲ್ವರು ತೆಲಂಗಾಣ ಕಡೆಯಿಂದ ನುಸುಳಿದ್ದರು ಎಂಬ ಮಾಹಿತಿ ದೊರೆತ ಕೂಡಲೇ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್‌ ವರಿಷ್ಠಾಧಿಕಾರಿ ನೀಲೋತ್ಪಾಲ್‌ ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌), ನಕ್ಸಲ್‌ ವಿರೋಧಿ ಕಾರ್ಯಾಚರಣೆಯ (ಎಎನ್‌ಒ) ‘ಸಿ–60’ ಕಮಾಂಡೊ ತಂಡ ಅಹೇರಿಯಾ ರೆಪನ್‌ಪಾಲ್‌ ಬಳಿ ಕೋಲಮಾರ್ಕ್ ಪರ್ವತ ಶ್ರೇಣಿಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿತು. ಮೃತ ನಕ್ಸಲರಿಂದ ಒಂದು ಎಕೆ–47 ರೈಫಲ್‌, ಒಂದು ಕಾರ್ಬೈನ್‌ ಮತ್ತು ದೇಶಿ ನಿರ್ಮಿತ ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತರು ತೆಲಂಗಾಣ ಸಮಿತಿಯ ಸದಸ್ಯರಾಗಿದ್ದು, ತೆಲಂಗಾಣದಿಂದ ವಿದರ್ಭ ಪ್ರದೇಶದ ಗಡ್ಚಿರೋಲಿಗೆ ಪ್ರಾಣಹಿತ ನದಿ ದಾಟಿ ಬಂದಿದ್ದರು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.