ಕಾಂಗ್ರೆಸ್‌ಗೆ ಮತ ಹಾಕುವುದರಿಂದ ಪ್ರಯೋಜನವಿಲ್ಲ, ಬಿಜೆಪಿಗೆ ಸೇರುತ್ತಾರೆ: ಹಿಮಂತ ಗುವಾಹಟಿ: ಮುಂಬರುವ ಲೋಕಸಭೆ ಚುನಾವಣೆ ಉದ್ದೇಶಿಸಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ. ಅಂತಿಮವಾಗಿ ಅವರು ಬಿಜೆಪಿಗೆ ಸೇರಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಚುನಾವಣೆಯಲ್ಲಿ ಗೆಲ್ಲುತ್ತಾರೋ ಅಥವಾ ಸೋಲುತ್ತಾರೋ ಎಂಬುದು ಎರಡನೇ ವಿಷಯ. ಮೊದಲು ಕಾಂಗ್ರೆಸ್‌ನಲ್ಲೇ ಅಭ್ಯರ್ಥಿಗಳು ಉಳಿಯುತ್ತಾರೆಯೇ ಎಂಬುದು ಪ್ರಶ್ನೆ ಎಂದು ಅವರು ಹೇಳಿದರು. ಕಾಂಗ್ರೆಸ್‌ನಲ್ಲೇ ಉಳಿದುಕೊಳ್ಳಲು ಯಾರಿಗೂ ಇಷ್ಟವಿಲ್ಲ. ಅವರೆಲ್ಲರೂ ಬಿಜೆಪಿಗೆ ಸೇರಲು ಬಯಸುತ್ತಾರೆ. ಹಾಗಾಗಿ ಕಾಂಗ್ರೆಸ್‌ಗೆ ಮತ ಹಾಕುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ಹೇಳಿದರು. ಅಲ್ಪಸಂಖ್ಯಾತರು ಅಥವಾ ಬಹುಸಂಖ್ಯಾತರು ಎನ್ನುವುದಿಲ್ಲ. ಜನತೆ ಪ್ರಧಾನಿ ಮೋದಿ ಅವರ 'ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌' ಪರಿಕಲ್ಪನೆಗೆ ಮತ ಹಾಕುತ್ತಾರೆ. ಅಲ್ಪಸಂಖ್ಯಾತರು ಎನ್ನುವ ವಿಚಾರದಿಂದ ಸಮಸ್ಯೆಯಿಲ್ಲ. ಅಲ್ಪಸಂಖ್ಯಾತರ ಪರವಾಗಿ ನಾವು ಕೆಲಸ ಮಾಡಿದ್ದೇವೆ. ಲಂಚ ನೀಡದೆ ಅಲ್ಪಸಂಖ್ಯಾತ ಯುವಜನತೆಗೆ ಕೆಲಸ ದೊರಕುತ್ತಿದೆ. ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.