ರಾಹುಲ್‌ ರೋಡ್‌ ಶೋದಲ್ಲಿ ಐಯುಎಂಎಲ್‌ ಬಾವುಟ ನಾಪತ್ತೆ: ಪಿಣರಾಯಿ ಟೀಕೆ ತಿರುವನಂತಪುರ: ‘ವಯನಾಡ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್‌ ಗಾಂಧಿ ಅವರು ರೋಡ್‌ ಶೋ ನಡೆಸುವ ವೇಳೆ ಮಿತ್ರ ಪಕ್ಷವಾದ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ (ಐಯುಎಂಎಲ್‌) ಬಾವುಟಗಳನ್ನು ಪ್ರದರ್ಶಿಸದಿರುವುದಕ್ಕೆ ಬಿಜೆಪಿಯ ಭಯ ಕಾರಣ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗುರುವಾರ ಹೇಳಿದರು. ಅವರದೇ ಪಕ್ಷದ ಬಾವುಟವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ರಾಹುಲ್‌ ಅವರಿಗೆ ಧೈರ್ಯವಿಲ್ಲ ಎಂದೂ ಅವರು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ‘ಐಯುಎಂಎಲ್‌ನ ಮತಗಳು ಬೇಕು. ಆದರೆ ಅದರ ಬಾವುಟ ಮುಖ್ಯವಲ್ಲ ಎಂಬ ನಿಲುವನ್ನು ಕಾಂಗ್ರೆಸ್‌ ಪಕ್ಷವು ಹೊಂದಿದೆ. ಅದು ಕೋಮುವಾದಿ ಶಕ್ತಿಗಳಿಗೆ ಬೆದರಿದೆ’ ಎಂದೂ ಹೇಳಿದರು. ಕಾಂಗ್ರೆಸ್‌ ತನ್ನ ನಿಲುವನ್ನು ಜನರ ಮುಂದೆ ಸ್ಪಷ್ಟಪಡಿಸಬೇಕು ಎಂದೂ ಆಗ್ರಹಿಸಿದರು. ರಾಹುಲ್‌ ಟೀಕಿಸಿದ ಸ್ಮೃತಿ: ಐಯುಎಂಎಲ್‌ನ ಬಾವುಟವನ್ನು ರೋಡ್‌ ಶೋನಲ್ಲಿ ಪ್ರದರ್ಶಿಸಲು ರಾಹುಲ್‌ ಗಾಂಧಿ ಅವರು ನಾಚಿಕೆ ಪಡುತ್ತಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಹೇಳಿದರು. ರಾಹುಲ್‌ ಅವರು ಆ ಪಕ್ಷದ ಬೆಂಬಲವನ್ನೂ ನಿರಾಕರಿಸಬೇಕು ಎಂದರು. ನಿಷೇಧಿತ ‍ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ರಾಜಕೀಯ ಸಂಘಟನೆಯಾದ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾವು (ಎಸ್‌ಡಿಪಿಐ) ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿರುವುದು ಆಘಾತ ತಂದಿದೆ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.