ಫೋನ್‌ ಕದ್ದಾಲಿಕೆ: 10 ಲಕ್ಷ ಸಂಭಾಷಣೆಗಳ ಧ್ವನಿಮುದ್ರಣ ಹೈದರಾಬಾದ್: ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ, ತೆಲಂಗಾಣ ಪೊಲೀಸ್‌ನ ವಿಶೇಷ ಗುಪ್ತಚರ ಘಟಕದ (ಎಸ್‌ಐಬಿ) ಡಿಎಸ್‌ಪಿ ದುಗ್ಯಾಲ ಪ್ರಣೀತ್‌ರಾವ್‌, ಕನಿಷ್ಠ 10 ಲಕ್ಷದಷ್ಟು ಸಂಭಾಷಣೆಗಳ ಧ್ವನಿಮುದ್ರಣ ಮಾಡಿದ್ದು, ಬೃಹತ್‌ ಪ್ರಮಾಣದ ದತ್ತಾಂಶವನ್ನು ಹೊಂದಿದ್ದಾಗಿ ತಿಳಿಸಿದ್ದಾರೆ. ‘ದುಗ್ಯಾಲ ಪ್ರಣೀತ್‌ ರಾವ್ ಮೂರು ಖಾಸಗಿ ವಾರ್‌ರೂಮ್‌ಗಳ ಕಾರ್ಯಾಚರಣೆ ನೋಡಿಕೊಳ್ಳುತ್ತಿದ್ದ. ಫೋನ್‌ ಕದ್ದಾಲಿಕೆ ಮಾಡುವುದಕ್ಕಾಗಿಯೇ ಖಾಸಗಿ ಸರ್ವರ್‌ಗಳನ್ನು ಹೊಂದಿದ್ದ’ ಎಂದು ಹೈದರಾಬಾದ್‌ ಪೊಲೀಸರು ತಿಳಿಸಿದ್ದಾರೆ. ಬಿಆರ್‌ಎಸ್‌ ಆಡಳಿತವಿದ್ದ ಅವಧಿಯಲ್ಲಿ ವಿರೋಧ ಪಕ್ಷಗಳ ನಾಯಕರ ಫೋನ್‌ಗಳ ಕದ್ದಾಲಿಕೆ ಮಾಡಿದ ಆರೋಪದಡಿ ಡಿಎಸ್‌ಪಿ ಪ್ರಣೀತ್‌ ರಾವ್‌ ಅವರನ್ನು ಬಂಧಿಸಲಾಗಿದೆ. ಆಗ ವಿಪಕ್ಷ ನಾಯಕರಾಗಿದ್ದ ಹಾಗೂ ಹಾಲಿ ಮುಖ್ಯಮಂತ್ರಿ ರೇವಂತ ರೆಡ್ಡಿ, ರಿಯಲ್‌ ಎಸ್ಟೇಟ್ ಉದ್ಯಮಿಗಳು, ಅಧಿಕಾರಿಗಳು, ಕೆಲ ಮಾಧ್ಯಮ ಪ್ರತಿನಿಧಿಗಳ ಸಂಭಾಷಣೆಗಳನ್ನು ಕದ್ದಾಲಿಸಲಾಗಿದೆ ಎಂಬ ಆರೋಪವನ್ನು ರಾವ್‌ ಎದುರಿಸುತ್ತಿದ್ದಾರೆ. ಕಳೆದ ಡಿಸೆಂಬರ್‌ 3ರಂದು ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ, ರಾವ್‌ ಅವರು ಹಾರ್ಡ್‌ ಡ್ರೈವ್‌ಗಳನ್ನು ಸುಟ್ಟು ಹಾಕುವ ಮೂಲಕ ದತ್ತಾಂಶ ಹಾಳು ಮಾಡಿದ್ದಾರೆ ಎನ್ನಲಾಗಿದೆ. ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಸ್ವಿಚ್‌ ಆಫ್‌ ಮಾಡುವ ಮೂಲಕ ಈ ಕೃತ್ಯಗಳನ್ನು ಎಸಗಿದ್ದಾರೆ. ತಮ್ಮ ಈ ಕೃತ್ಯವನ್ನು ಮರೆಮಾಚುವುದಕ್ಕಾಗಿ, ಹೊಸ ಹಾರ್ಡ್‌ ಡಿಸ್ಕ್‌ಗಳನ್ನು ರಾವ್‌ ಅಳವಿಸಿದ್ದರು ಎಂದೂ ಆರೋಪಿಸಲಾಗಿದೆ. ಎಸ್‌ಐಬಿ ಹೆಚ್ಚುವರಿ ಎಸ್ಪಿ ಡಿ.ರಮೇಶ್‌ ನೀಡಿರುವ ದೂರಿನನ್ವಯ, ಪ್ರಣೀತ್‌ ರಾವ್ ಅವರನ್ನು ಇತ್ತೀಚೆಗೆ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಏಳು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.