ಮೂರು ಕ್ಷೇತ್ರಗಳಿಗಾಗಿ ಎಸ್‌ಪಿ ಅಂಗಪಕ್ಷದಿಂದ ಒತ್ತಡ ತಂತ್ರ ಲಖನೌ: ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟಕ್ಕೆ ಉತ್ತರ ಪ್ರದೇಶದಲ್ಲಿ ಹೊಸ ಸಮಸ್ಯೆ ಎದುರಾಗಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಅಂಗಪಕ್ಷವಾಗಿದ್ದ ಅಪ್ನಾ ದಳ (ಕೆ) ಪಕ್ಷವು ಬುಧವಾರ ಮೂರು ಸ್ಥಾನಗಳಿಗಾಗಿ ಬೇಡಿಕೆ ಇಟ್ಟಿದೆ. ತನ್ನ ಬೇಡಿಕೆ ಈಡೇರದಿದ್ದರೆ ಮೈತ್ರಿ ತೊರೆಯುವುದಾಗಿ ಬೆದರಿಕೆ ಹಾಕಿದೆ. ಜತೆಗೆ, ತಮ್ಮ ಪಕ್ಷವು ಫೂಲ್‌‍ಪುರ, ಮಿರ್ಜಾಪುರ ಮತ್ತು ಕೌಶಾಂಬಿ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಸಹ ಅಪ್ನಾ ದಳ(ಕೆ) ಪಕ್ಷದ ಅಧ್ಯಕ್ಷೆ ಕೃಷ್ಣಾ ಪಟೇಲ್ ಅವರು ಘೋಷಿಸಿದ್ದಾರೆ. ‘ನಾವು ಇಂಡಿಯಾ ಮೈತ್ರಿಕೂಟದ ನಾಯಕರೊಂದಿಗೆ ಮಾತನಾಡುತ್ತೇವೆ. ನಮಗೆ ಈ ಮೂರು ಕ್ಷೇತ್ರಗಳು ಬೇಕು. ಮಾತುಕತೆಯ ಫಲಿತಾಂಶ ಏನೇ ಇದ್ದರೂ ನಾವು ಈ ಮೂರು ಕ್ಷೇತ್ರಗಳಲ್ಲಿ ನಮ್ಮ ಅ‌ಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ’ ಎಂದು ಅಪ್ನಾ ದಳ (ಕೆ) ಅಧ್ಯಕ್ಷೆ ಕೃಷ್ಣಾ ಪಟೇಲ್ ಹೇಳಿದ್ದಾರೆ. ಕೃಷ್ಣಾ ಪಟೇಲ್ ಅವರು ಅಪ್ನಾ ದಳ ಪಕ್ಷದ ಮತ್ತೊಂದು ಬಣದ ಅಧ್ಯಕ್ಷೆಯಾಗಿರುವ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಅವರ ತಾಯಿಯಾಗಿದ್ದಾರೆ. ಎಸ್‌ಪಿ ರಾಜ್ಯದ 17 ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದು, ಉಳಿದ 63 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಲು ತೀರ್ಮಾನಿಸಿತ್ತು. ಪ್ರಭಾವಿ ‘ಕುರ್ಮಿ’ ಸಮುದಾಯದ ಪಕ್ಷ ಎಂದೇ ಹೆಸರಾಗಿರುವ ಅಪ್ನಾ ದಳ (ಕೆ), ಪೂರ್ವ ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಪ್ರಭಾವ ಹೊಂದಿದೆ. ಕೃಷ್ಣಾ ಪಟೇಲ್ ಅವರ ಬೇಡಿಕೆಯು ಎಸ್‌ಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.