ಸಿಎಎ ಅನುಷ್ಠಾನದಿಂದ ಯಾರೂ ಪೌರತ್ವ ಕಳೆದುಕೊಳ್ಳುದಿಲ್ಲ: ರಾಜನಾಥ ಸಿಂಗ್ ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅನುಷ್ಠಾನದಿಂದ ಯಾವೊಬ್ಬ ಭಾರತೀಯನು ಪೌರತ್ವ ಕಳೆದುಕೊಳ್ಳುವುದಿಲ್ಲ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ಗೊಂದಲ ಮೂಡಿಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು. ಪಕ್ಷದ ಅಭ್ಯರ್ಥಿ ಪರ ತಮಿಳುನಾಡಿನ ನಾಮಕ್ಕಲ್ ಲೋಕಸಭಾಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ ಅವರು, ರಾಮಮಂದಿರ ಸೇರಿದಂತೆ ಕಳೆದ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಬಿಜೆಪಿ ಜಾರಿಗೆ ತಂದಿದೆ ಎಂದರು. ‘ಸಿಎಎ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದೆವು. ಇದೀಗ ಜಾರಿ ಮಾಡಿದ್ದೇವೆ. ಯಾವುದೇ ಧರ್ಮದ ಹೆಣ್ಣು ಮಗಳು ನಮ್ಮ ಮನೆಯ ಹೆಣ್ಣು ಮಗಳಿದ್ದಂತೆ. ಅವಳಿಗಾಗುವ ನೋವು ನಮಗೂ ನೋವುಂಟು ಮಾಡುತ್ತದೆ. ಅದಕ್ಕಾಗಿಯೇ ತ್ರಿವಳಿ ತಲಾಖ್‌ ಅನ್ನು ರದ್ದುಗೊಳಿಸಿದೆವು. ಪೌರತ್ವ ಕಾಯ್ದೆ ಕುರಿತಂತೆ ಕಾಂಗ್ರೆಸ್‌–ಡಿಎಂಕೆ ಗೊಂದಲ ಸೃಷ್ಟಿಸುತ್ತಿವೆ. ಸಿಎಎಯಿಂದ ದೇಶದ ಪ್ರಜೆಯೊಬ್ಬ ಆತ ಹಿಂದು, ಮುಸ್ಲಿಂ, ಕ್ರೈಸ್ತ, ಜೈನ ಯಾವುದೇ ಆಗಿರಲಿ, ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದರು ‘ಭಾರತವು ಇನ್ನು ಮುಂದೆ ದುರ್ಬಲ ರಾಷ್ಟ್ರವಲ್ಲ. ದೇಶದ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮೇಲೆ ನಮಗೆ ಬಲವಾದ ವಿಶ್ವಾಸವಿದೆ. ಯಾರಾದರೂ ಕಣ್ಣು ರೆಪ್ಪೆ ಅಲ್ಲಾಡಿಸಿದರೆ, ನಮ್ಮ ಸೇನೆಯು ಅವರಿಗೆ ತಕ್ಕ ಉತ್ತರವನ್ನು ನೀಡಲು ಸಿದ್ಧವಾಗಿದೆ’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.