ದೆಹಲಿ: ಕಳ್ಳಸಾಗಣೆ ಜಾಲದಿಂದ 2 ನವಜಾತ ಶಿಶುಗಳ ರಕ್ಷಿಸಿದ ಸಿಬಿಐ ನವದೆಹಲಿ: ಮಕ್ಕಳ ಕಳ್ಳಸಾಗಣೆ ಜಾಲವನ್ನು ಭೇದಿಸಿದ ಸಿಬಿಐ, 3 ನವಜಾತ ಶಿಶುಗಳನ್ನು ರಕ್ಷಿಸಿ, 7 ಮಂದಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ದೇಶದಾದ್ಯಂತ ಮಕ್ಕಳ ಕಳ್ಳ ಸಾಗಣೆ ಜಾಲ ಹರಡಿರುವ ಬಗೆಗಿನ ಖಚಿತ ಮಾಹಿತಿ ಮೇರೆಗೆ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಶುಕ್ರವಾರ ಸಂಜೆ ದೆಹಲಿ ಮತ್ತು ಹರಿಯಾಣದ 7 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಒಂದೂವರೆ ದಿನ ಮತ್ತು 15 ದಿನಗಳ ಹಿಂದೆ ಜನಿಸಿದ್ದ ಎರಡು ಗಂಡು ಶಿಶುಗಳು ಮತ್ತು ಒಂದು ತಿಂಗಳಿನ ಹೆಣ್ಣುಮಗುವನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ಇದರೊಂದಿಗೆ ₹5.5 ಲಕ್ಷ ಹಣ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮಗುವನ್ನು ಮಾರಾಟ ಮಾಡಿದ ಮಹಿಳೆ ಮತ್ತು ಖರೀದಿಸಿದ ವ್ಯಕ್ತಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಜೊತೆಗೆ ಇತರ ಶಂಕಿತರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತನಿಖಾ ಸಂಸ್ಥೆ ಅಧಿಕಾರಿಗಳು ತಿಳಿಸಿದರು. ಆರೋಪಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಪೇಜ್‌ ಮತ್ತು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಜಾಹೀರಾತು ನೀಡುವ ಮೂಲಕ ಮಕ್ಕಳಿಲ್ಲದ ದಂಪತಿಗಳನ್ನು ಸಂಪರ್ಕಿಸುತ್ತಿದ್ದರು. ಮಕ್ಕಳು ಬೇಡವೆನ್ನುವ ಪೋಷಕರು ಮತ್ತು ಬಾಡಿಗೆ ತಾಯಂದಿರಿಂದ ಮಕ್ಕಳನ್ನು ಖರೀದಿಸಿ ₹4 ಲಕ್ಷದಿಂದ 6 ಲಕ್ಷ ಹಣಕ್ಕೆ ಮಾರಾಟ ಮಾಡುತ್ತಿದ್ದರು. ಇದರೊಂದಿಗೆ ಆರೋಪಿಗಳು ದತ್ತು ಪ್ರಕ್ರಿಯೆಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಲವು ದಂಪತಿಗಳಿಗೆ ಲಕ್ಷಾಂತರ ರೂಪಾಯಿ ಹಣ ವಂಚಿಸಿದ್ದಾರೆ ಎನ್ನುವ ಆರೋಪಗಳಿವೆ. ಬಂಧಿತರಲ್ಲಿ ನೀರಜ್‌ ಎಂಬಾತ ಹರಿಯಾಣ ಮೂಲದವನಾಗಿದ್ದು, ಇಂದು ಪವಾರ್‌, ಅಸ್ಲಾಮ್‌, ಪೂಜಾ ಕಶ್ಯಪ್‌, ರಿತು, ಅಂಜಲಿ ಮತ್ತು ಕವಿತಾ ದೆಹಲಿ ಮೂಲದವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.