ಕೇಜ್ರಿವಾಲ್ ಬಂಧನ: ಎಎಪಿ ಪ್ರಚಾರಕ್ಕೆ ಹಿನ್ನಡೆ? ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರ ಬಂಧನವು ಲೋಕಸಭೆ ಚುನಾವಣೆಯಲ್ಲಿ ವಿವಿಧೆಡೆ ತನ್ನ ಖಾತೆ ತೆರೆಯುವ ಆಮ್‌ ಆದ್ಮಿ ಪಕ್ಷದ (ಎಎಪಿ) ಯತ್ನಕ್ಕೆ ಹಿನ್ನಡೆ ಆಗುವ ಸಾಧ್ಯತೆಗಳಿವೆ. ಅರವಿಂದ್ ಕೇಜ್ರಿವಾಲ್‌ ಅವರು ಎಎಪಿ ಪಕ್ಷದ ಪ್ರಮುಖ ಪ್ರಚಾರಕರಾಗಿದ್ದಾರೆ. ಎಎಪಿ ಪ್ರಸ್ತುತ ಲೋಕಸಭೆ ಚುನಾವಣೆಗೆ ದೆಹಲಿ, ಹರಿಯಾಣ ಮತ್ತು ಗುಜರಾತ್‌ನಲ್ಲಿ ಸ್ಪರ್ಧೆಯಲ್ಲಿದ್ದು, ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಎಎಪಿ ಈಗಾಗಲೇ ಪಕ್ಷದ ಮುಖಂಡರಾದ ಮನೀಶ್‌ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಸಂಜಯ್‌ ಸಿಂಗ್ ಅವರ ಅನುಪಸ್ಥಿತಿಯನ್ನು ಎದುರಿಸುತ್ತಿದೆ. ಈಗ ಕೇಜ್ರಿವಾಲ್ ಅವರ ಬಂಧನವು ಪಕ್ಷದ ಮೇಲೆ ಪರಿಣಾಮ ಬೀರಬಹುದಾಗಿದೆ. ದೆಹಲಿಯಲ್ಲಿ 4, ಗುಜರಾತ್‌ನಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಎಎಪಿ, ಕೇಜ್ರಿವಾಲ್‌ ಅವರ ಪ್ರಚಾರವನ್ನು ಅವಲಂಬಿಸಿದೆ. ಪಂಜಾಬ್‌ನಲ್ಲಿ 13 ಕ್ಷೇತ್ರಗಳಿಗೆ ಸ್ಪರ್ಧಿಸಿದ್ದು, ಅಲ್ಲಿ ಮುಖ್ಯಮಂತ್ರಿ ಭಗವಂತ ಮಾನ್ ಪ್ರಚಾರದ ಹೊಣೆ ಹೊತ್ತಿದ್ದಾರೆ. ಇಂದು ದೇಶದಾದ್ಯಂತ ಪ್ರತಿಭಟನೆ: ಎಎಪಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ವಿರೋಧಿಸಿ ದೇಶದಾದ್ಯಂತ ಶುಕ್ರವಾರ ಬಂದ್‌ಗೆ ಆಮ್‌ ಆದ್ಮಿ ಪಕ್ಷ (ಎಎಪಿ) ಕರೆ ನೀಡಿದೆ. ‘ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಸರ್ವಾಧಿಕಾರಿ ಧೋರಣೆಯ ಪ್ರಕಟಣೆ. ಇದನ್ನು ವಿರೋಧಿಸಿ ಶುಕ್ರವಾರ ದೇಶದಾದ್ಯಂತ ಬಿಜೆಪಿ ಕಚೇರಿಗಳ ಎದುರು ಪ್ರತಿಭಟನೆ ನಡೆಸಲು ಕರೆ ನೀಡುತ್ತಿದ್ದೇನೆ. ದೆಹಲಿಯ ಎಎಪಿ ಕಚೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ಪಕ್ಷದ ನಾವೆಲ್ಲರೂ ಸೇರುತ್ತೇವೆ. ಪ್ರತಿಭಟನೆ ಪ್ರಾರಂಭಿಸುತ್ತೇವೆ’ ಎಂದು ಪಕ್ಷದ ದೆಹಲಿ ಘಟಕದ ಸಂಚಾಲಕ ಗೋಪಾಲ್ ರಾಯ್ ಗುರುವಾರ ಪ್ರತಿಕ್ರಿಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.