ಹಿಮಾಚಲ: ಬಿಜೆಪಿಗೆ ಮತ ಹಾಕಿದ್ದ ಮೂವರು ಪಕ್ಷೇತರ ಶಾಸಕರ ರಾಜೀನಾಮೆ ಶಿಮ್ಲಾ: ಈಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗೆ ಮತ ಹಾಕಿದ್ದ ಮೂವರು ಪಕ್ಷೇತರ ಶಾಸಕರು ಶುಕ್ರವಾರ ವಿಧಾನಸಭಾ ಕಾರ್ಯದರ್ಶಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆಶಿಶ್‌ ಶರ್ಮಾ (ಹಮೀರ್‌ಪುರ), ಹೋಶಿಯಾರ್ ಸಿಂಗ್ (ದೆಹ್ರಾ), ಕೆ.ಎಲ್.ಠಾಕೂರ್‌ (ನಾಲಾಗಢ) ರಾಜೀನಾಮೆ ನೀಡಿದವರು. ಶಿಮ್ಲಾದಲ್ಲಿ ಪ್ರತಿಪಕ್ಷ ನಾಯಕ ಜೈರಾಮ್‌ ಠಾಕೂರ್ ಅವರನ್ನು ಭೇಟಿಯಾದ ನಂತರ, ಈ ಮೂವರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ‘ನಾವು ರಾಜೀನಾಮೆ ನೀಡಿದ್ದು, ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇವೆ’ ಎಂದು ಹೋಶಿಯಾರ್ ಸಿಂಗ್‌ ಪತ್ರಕರ್ತರಿಗೆ ತಿಳಿಸಿದರು. ‘ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಶಾಸಕರು ಮತ್ತು ಅವರ ಕುಟುಂಬದವರನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ’ ಎಂದು ರಾಜೀನಾಮೆ ನೀಡಿದ ಪಕ್ಷೇತರ ಶಾಸಕರು ದೂರಿದ್ದಾರೆ. ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮೂವರು ಪಕ್ಷೇತರ ಶಾಸಕರು ಸೇರಿದಂತೆ ಕಾಂಗ್ರೆಸ್‌ನ ಆರು ಮಂದಿ ಬಂಡಾಯ ಶಾಸಕರು ಬಿಜೆಪಿಯ ಅಭ್ಯರ್ಥಿಗೆ ತಮ್ಮ ಮತ ಚಲಾಯಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.