ಬಾರಾಮತಿ: ಪವಾರ್ ಕುಟುಂಬದ ವಿರುದ್ಧ ವಿಜಯ್ ಶಿವತಾರೆ ಕಣಕ್ಕೆ ಮುಂಬೈ: ಶಿವಸೇನಾ ಮುಖಂಡ ವಿಜಯ್ ಶಿವತಾರೆ ಅವರು ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಪವಾರ್ ಕುಟುಂಬದ ಪ್ರಾಬಲ್ಯವಿರುವ ಈ ಕ್ಷೇತ್ರದ ಚುನಾವಣಾ ಸಮೀಕರಣಗಳು ಬದಲಾಗುವ ಸಾಧ್ಯತೆಗಳಿವೆ. ‘ನಾನು ಏಪ್ರಿಲ್ 12ರಂದು ನಾಮಪತ್ರ ಸಲ್ಲಿಸುತ್ತೇನೆ. ಇದು ನಿಶ್ಚಿತ’ ಎಂದು ಶಿವತಾರೆ ಹೇಳಿದ್ದಾರೆ. ಬಾರಾಮತಿಯ ಚುನಾವಣೆಯು ಮೂರನೇ ಹಂತದಲ್ಲಿ, ಮೇ.7ರಂದು, ನಡೆಯಲಿದೆ. ಶಿವತಾರೆ ಅವರ ಮನವೊಲಿಕೆಗೆ ಶಿವಸೇನಾ ಮುಖಂಡರು ಹಾಗೂ ಪಕ್ಷದ ಮುಖ್ಯಸ್ಥ ಏಕನಾಥ್ ಶಿಂದೆ ಮಾಡಿದ ಪ್ರಯತ್ನಗಳು ವಿಫಲವಾದ ನಂತರ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ. ‘ಪವಾರ್ ಕುಟುಂಬಕ್ಕೆ ಮತ ಹಾಕುವುದನ್ನು ಬಿಟ್ಟರೆ ಬಾರಾಮತಿಯ ಜನರಿಗೆ ಬೇರೆ ಆಯ್ಕೆಯೇ ಇಲ್ಲವಾಗಿದೆ. ಮತದಾರರು ಸುಪ್ರಿಯಾ ಅವರಿಗೆ ಮತ ಹಾಕಬೇಕು. ಇಲ್ಲವೇ ಸುನೇತ್ರಾ ಅವರಿಗೆ ಮತ ಹಾಕಬೇಕು. ಇದು ಪವಾರ್ ಕುಟುಂಬ ರಾಜಕಾರಣವನ್ನು ಅಂತ್ಯಗೊಳಿಸುವ ಕಾಲವಾಗಿದೆ’ ಎಂದು ಅವರು ತಿಳಿಸಿದ್ದಾರೆ. ಪುರಂದರ ಕ್ಷೇತ್ರದಿಂದ ಮೂರು ಬಾರಿ ಗೆದ್ದು ಶಾಸಕ, ಮಂತ್ರಿಯಾಗಿದ್ದ ಶಿವತಾರೆ, ಉದ್ಧವ್ ಠಾಕ್ರೆ ಬಣ ತ್ಯಜಿಸಿ ಏಕನಾಥ್ ಶಿಂದೆ ಬಣ ಸೇರಿದ್ದರು. ಬಾರಾಮತಿಯಲ್ಲಿ ‘ಬಾಪು’ ಎಂದು ಖ್ಯಾತರಾಗಿರುವ ಶಿವತಾರೆ, ಪವಾರ್ ಕುಟುಂಬದ ವಿರೋಧಿ ಎಂದೇ ಖ್ಯಾತರಾಗಿದ್ದಾರೆ. ಎನ್‌ಸಿಪಿ ಹೋಳಾಗುವ ಮುನ್ನ 2019ರ ವಿಧಾನಸಭಾ ಚುನಾವಣೆಯಲ್ಲಿ, ಶಿವತಾರೆ ಅವರನ್ನು ಅಜಿತ್ ಪವಾರ್ ಸೋಲುವಂತೆ ಮಾಡಿದ್ದರು. ಬಾರಾಮತಿಯ ಚುನಾವಣೆಯನ್ನು ಇದುವರೆಗೆ ಎನ್‌ಸಿಪಿಯ (ಎಸ್‌ಸಿಪಿ) ಶರದ್ ಪವಾರ್ ಅವರ ಮಗಳು ಸುಪ್ರಿಯಾ ಸುಳೆ ಮತ್ತು ಎನ್‌ಸಿಪಿ ಅಧ್ಯಕ್ಷ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪತ್ನಿ, ಸುನೇತ್ರಾ ಪವಾರ್ ನಡುವಿನ ನೇರ ಹಣಾಹಣಿ ಎನ್ನಲಾಗಿತ್ತು. ಶಿವತಾರೆ ಸ್ಪರ್ಧೆಯೊಂದಿಗೆ ಅದು ತ್ರಿಕೋನ ಸ್ಪರ್ಧೆಯಾಗಿ ಮಾರ್ಪಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.