ಪ. ಬಂಗಾಳ: ಪಕ್ಷದ ಅಭ್ಯರ್ಥಿ ವಿರುದ್ಧವೇ ಕಣಕ್ಕಿಳಿಯುವುದಾಗಿ ಘೋಷಿಸಿದ ಶಾಸಕ ಕೋಲ್ಕತ್ತ: ಡಾರ್ಜಿಲಿಂಗ್‌ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ರಾಜು ಬಿಸ್ತಾ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಬಿಜೆಪಿಯ ಕುರ್ಸೆಯಾಂಗ್ ಕ್ಷೇತ್ರದ ಶಾಸಕ ಬಿಷ್ಣು ಪ್ರಸಾದ್‌ ಶರ್ಮಾ ಸೋಮವಾರ ಘೋಷಿಸಿದ್ದಾರೆ. ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ಅವರು, ‘ಪಕ್ಷೇತರರಾಗಿ ಸ್ಪರ್ಧಿಸಿದರೂ ಬಿಜೆಪಿಯಲ್ಲೇ ಇರುತ್ತೇನೆ. ಪಕ್ಷ ಬೇಕಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳಬಹುದು. ಆದರೆ ಪಕ್ಷದೊಂದಿಗೆ ಇರುವ ಸಂಬಂಧ ಕಳಚಿಕೊಳ್ಳಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ. ‘ಬಿಸ್ತಾ ಅವರು ನಮ್ಮ ಅಭ್ಯರ್ಥಿ ಅಲ್ಲ. ನಮಗೆ ಹೊರಗಿನ ಅಭ್ಯರ್ಥಿ ಬೇಕಿಲ್ಲ. ಸ್ಥಳೀಯ ಅಭ್ಯರ್ಥಿ ಬಿಜೆಪಿಗೆ ಸಿಗದಿದ್ದದ್ದು ದುರದೃಷ್ಠಕರ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ಡಾರ್ಜಿಲಿಂಗ್‌ಗೆ ಹೊರಗಿನವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿರುವುದು ಇದು ನಾಲ್ಕನೇ ಬಾರಿ. ಇಂಥವರು ಜನರ ನೈಜ ಸಮಸ್ಯೆಯ ಬಗ್ಗೆ ಧ್ವನಿ ಎತ್ತುವುದಿಲ್ಲ. ಇದು ಡಾರ್ಜಿಲಿಂಗ್‌ನ 17 ಲಕ್ಷ ಮತದಾರರಿಗೆ ದೊಡ್ಡ ಹೊಡೆತ’ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಮಿಕ್‌ ಭಟ್ಟಾಚಾರ್ಯ, ‘ಬಿಸ್ತಾ ಅವರನ್ನು ಮತ್ತೆ ಕಣಕ್ಕಿಳಿಸಿರುವ ನಿರ್ಧಾರ ಅಂತಿಮ. ಪಕ್ಷ ಈ ಬಗ್ಗೆ ಒಗ್ಗಟ್ಟಾಗಿದೆ. ಹಿಂದಿಗಿಂತ ಹೆಚ್ಚು ಅಂತರದಿಂದ ಬಿಸ್ತಾ ಗೆಲ್ಲಲಿದ್ದಾರೆ’ ಎಂದು ಹೇಳಿದ್ದಾರೆ. ಇದೇ ವೇಳೆ ಶರ್ಮಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದರ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.