ಮುಂಬೈ | 6 ಅಂತಸ್ತಿನ ಕಾರ್ಪೊರೇಟ್ ಪಾರ್ಕ್‌ನಲ್ಲಿ ಅಗ್ನಿ ಅವಘಡ: 50 ಮಂದಿ ರಕ್ಷಣೆ ಮುಂಬೈ: ಮುಂಬೈಯ ಉಪನಗರ ಮುಳುಂಡ್‌ನಲ್ಲಿ ಆರು ಅಂತಸ್ತಿನ ಕಾರ್ಪೊರೇಟ್ ಪಾರ್ಕ್‌ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 50 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 9.25ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಕಟ್ಟಡದ ವಿವಿಧ ಮಹಡಿಗಳಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೆಟ್ಟಿಲು ಹಾಗೂ ಏಣಿಗಳ ಸಹಾಯದಿಂದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಯಾರಿಗೂ ಗಾಯದ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ. ಆರನೇ ಮಹಡಿಯಲ್ಲಿರುವ ಏವಿಯರ್ ಕಾರ್ಪೊರೇಟ್ ಪಾರ್ಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. 1,000 ಚದರ ಅಡಿ ವಿಸ್ತೀರ್ಣದಲ್ಲಿ ವೈರಿಂಗ್, ವಿದ್ಯುತ್ ಪರಿಕರ, ಎಸಿ ಘಟಕ, ಪಿಠೋಪಕರಣ ಹಾಗೂ ಕಚೇರಿಯ ದಾಖಲೆಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ ಅವಘಡದ ಬಗ್ಗೆ ಮಾಹಿತಿ ಬಂದ ಕೂಡಲೆ ನಾಲ್ಕು ಅಗ್ನಿಶಾಮಕ ವಾಹನಗಳು, ಮೂರು ಬೃಹತ್ ನೀರಿನ ಟ್ಯಾಂಕರ್‌ಗಳು ಸ್ಥಳಕ್ಕೆ ಧಾವಿಸಿದವು ಎಂದು ಅವರು ಹೇಳಿದ್ದಾರೆ. ಮುಂಬೈ ಪೊಲೀಸ್, ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸಿಬ್ಬಂದಿ ಅಗ್ನಿ ನಂದಿಸಲು ನೆರವಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.