ಸಂದೇಶ್‌ಖಾಲಿ: ಬಿಜೆಪಿ ಅಭ್ಯರ್ಥಿ ವಿರುದ್ಧ ಪೋಸ್ಟರ್ ಸಮರ ಕೋಲ್ಕತ್ತ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿರುವುದನ್ನು ವಿರೋಧಿಸಿ ವಿವಿಧೆಡೆ ಕೈಬರಹದ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಟಿಎಂಸಿಯಿಂದ ಅಮಾನತುಗೊಂಡಿರುವ ಮುಖಂಡ ಶಾಜಹಾನ್ ಶೇಖ್ ಮತ್ತು ಬೆಂಬಲಿಗರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಮಾಡಿದ್ದ ರೇಖಾ ಪಾತ್ರಾ ಎಂಬವರನ್ನು ಬಿಜೆಪಿಯು ಬಸಿರ್‌ಹಾತ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಭಾನುವಾರ ಘೋಷಿಸಿತ್ತು. ಸಂದೇಶ್‌ಖಾಲಿ ಕೂಡ ಈ ಕ್ಷೇತ್ರಕ್ಕೆ ಸೇರಿದೆ. ‘ರೇಖಾ ಅವರು ಅಭ್ಯರ್ಥಿಯಾಗುವುದನ್ನು ನಾವು ಬಯಸುವುದಿಲ್ಲ’ ಎಂಬ ಘೋಷವಾಕ್ಯವಿರುವ ಪೋಸ್ಟರ್‌ಗಳು ಕ್ಷೇತ್ರದ ವಿವಿಧೆಡೆ ಕಂಡು ಬಂದಿವೆ. ಆಡಳಿತಾರೂಢ ಟಿಎಂಸಿಯು ಇಂತಹ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿಯ ಸ್ಥಳೀಯ ಮುಖಂಡರು ಆರೋಪಿಸಿದ್ದಾರೆ. ಈ ಆರೋಪಗಳನ್ನು ಟಿಎಂಸಿ ಮುಖಂಡರು ತಳ್ಳಿಹಾಕಿದ್ದಾರೆ. ‘ಈ ಹಿಂದೆ ನಾವು ಈ ಕ್ಷೇತ್ರದ ಸಂಸದರನ್ನು ನೋಡಿಲ್ಲ. ನಮ್ಮ ಗ್ರಾಮದ ಮಹಿಳೆ ಸ್ಪರ್ಧಿಸುತ್ತಿರುವುದು ಸಂತಸ ತಂದಿದೆ’ ಎಂದು ಸ್ಥಳೀಯ ಮಹಿಳೆಯರು ತಿಳಿಸಿದರು. ಸಂದೇಶ್‌ಖಾಲಿಯಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ರೇಖಾ ಅವರು ಪ್ರಮುಖ ಪಾತ್ರ ವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.