‘ಉದ್ಯೋಗ ಸೃಷ್ಟಿ; ಬಿಜೆಪಿಯು ಯುವಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ; ರಾಹುಲ್ ನವದೆಹಲಿ: ‘ವಾರ್ಷಿಕ ಎರಡು ಕೋಟಿ ಉದ್ಯೋಗಾವಕಾಶ ಸೃಷ್ಟಿ ಕುರಿತಂತೆ ಬಿಜೆಪಿಯು ದೇಶದ ಯುವಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಆರೋಪಿಸಿದರು. ಉದ್ಯೋಗ ಸೃಷ್ಟಿ ಕುರಿತಂತೆ ಬಿಜೆಪಿ ಸೃಷ್ಟಿಸಿದ ಭ್ರಮೆಯ ಚೌಕಟ್ಟಿನಿಂದ ಹೊರಬಂದು ಯುವಜನರು ತಮ್ಮದೇ ಗುರಿ ನಿಗದಿಪಡಿಸಿ ಕೊಳ್ಳಬೇಕು. ಕಾಂಗ್ರೆಸ್‌ ‘ಯುವ ನ್ಯಾಯ’ ಭರವಸೆ ಮೂಲಕ ದೇಶದಲ್ಲಿ ಉದ್ಯೋಗ ಕ್ರಾಂತಿ ಕೈಗೊಳ್ಳಲು ತೀರ್ಮಾನಿಸಿದೆ ಎಂದರು. ‘ಮೋದಿಯವರೇ, ಉದ್ಯೋಗಾ ವಕಾಶ ಕುರಿತು ನಿಮಗೆ ಸ್ಪಷ್ಟ ಯೋಜನೆಗಳಿವೆಯೇ ಎಂಬುದು ಯುವಜನರ ಪ್ರಶ್ನೆಯಾಗಿದೆ. ಪ್ರತಿ ಗ್ರಾಮ, ರಸ್ತೆಯಲ್ಲಿ ಬಿಜೆಪಿಯವರಿಗೆ ಈ ಪ್ರಶ್ನೆ ಕೇಳ ಲಾಗುತ್ತಿದೆ. ಉದ್ಯೋಗ ಸೃಷ್ಟಿ ಕುರಿತಂತೆ ಸುಳ್ಳು ಹೇಳಿದ್ದೇಕೆ?’ ಎಂದು ಪ್ರಶ್ನಿಸಿದ್ದಾರೆ. ಯುವ ನ್ಯಾಯ ಯೋಜನೆಯಡಿ ಉದ್ಯೋಗ ಕ್ರಾಂತಿಗೆ ಕಾಂಗ್ರೆಸ್‌ ನಿರ್ಧರಿಸಿದೆ. ಪಕ್ಷ ಅಧಿಕಾರಕ್ಕೆ ಬರುತ್ತಿ ದ್ದಂತೆ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪ್ರತಿ ಪದವೀಧರ ಯುವಜನರಿಗೆ ‘ಮೊದಲ ಉದ್ಯೋಗ ಖಚಿತ’ ಯೋಜನೆಯಡಿ ವಾರ್ಷಿಕ ₹1 ಲಕ್ಷ ನೀಡಲಾಗುತ್ತದೆ. ಕಾಯ್ದೆ ರೂಪಿಸುವ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ. ಎರಡು ಭಿನ್ನ ಸಿದ್ಧಾಂತಗಳ ನಡುವಣ ವ್ಯತ್ಯಾಸ ಗುರುತಿಸಲು ಈಗ ಸಕಾಲ. ಕಾಂಗ್ರೆಸ್‌ ಯುವಜನರ ಭವಿಷ್ಯ ಭದ್ರಪಡಿಸಲು ಬಯಸುತ್ತದೆ. ಬಿಜೆಪಿಯು ಅವರನ್ನು ತಪ್ಪುದಾರಿಗೆ ಎಳೆಯಲು ಬಯಸುತ್ತಿದೆ ಎಂದು ರಾಹುಲ್‌ಗಾಂಧಿ ಅವರು ಹೇಳಿದ್ದಾರೆ. ನಿರುದ್ಯೋಗ ಸಮಸ್ಯೆ ಕುರಿತಾಗಿ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್‌ ಪಕ್ಷವು ನಿರಂತರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದು, ಇದನ್ನು ಚುನಾವಣಾ ವಸ್ತುವಾಗಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.