‘ಅಗ್ನಿಪಥ’: ಅಗತ್ಯವಿದ್ದಲ್ಲಿ ಬದಲಾವಣೆ ತರಲು ಸಿದ್ಧ: ರಾಜನಾಥ್‌ ಸಿಂಗ್ ನವದೆಹಲಿ: ‘ಅಗತ್ಯ ಕಂಡುಬಂದಲ್ಲಿ ಅಗ್ನಿಪಥ ಯೋಜನೆಯಲ್ಲಿ ಯಾವುದೇ ಬದಲಾವಣೆ ತರಲು ಸರ್ಕಾರ ಮುಕ್ತವಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಗುರುವಾರ ಹೇಳಿದ್ದಾರೆ. ‘ಟೈಮ್ಸ್‌ ನೌ’ ಸುದ್ದಿವಾಹಿನಿ ಆಯೋಜಿಸಿದ್ದ ಶೃಂಗಸಭೆಯಲ್ಲಿ ಮಾತನಾಡಿದ ಅವರು,‘ಯೋಜನೆಯಲ್ಲಿ ಯಾವುದೇ ನ್ಯೂನತೆ ಇರುವುದು ಬಂದಲ್ಲಿ, ಅದನ್ನು ಸರಿಪಡಿಸಲು ಕೂಡ ನಾವು ಸಿದ್ಧ’ ಎಂದು ಹೇಳಿದರು. ‘ಬರುವ ದಿನಗಳಲ್ಲಿ ಅಗ್ನಿವೀರರಾಗಿ ಸೇನೆಗೆ ಸೇರ್ಪಡೆಯಾಗುವ ಯುವಕರಿಗೆ ಯಾವುದೇ ರೀತಿ ಸಮಸ್ಯೆ ಆಗುವುದಿಲ್ಲ’ ಎಂದರು. ಅಗ್ನಿಪಥ ಯೋಜನೆ ಕುರಿತ ಟೀಕೆಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇಂತಹ ಪ್ರಶ್ನೆಗಳಿಗೆ ಅರ್ಥವೇ ಇಲ್ಲ. ಸಶಸ್ತ್ರ ಪಡೆಗಳು ತರುಣರಿಂದ ತುಂಬಿರಬೇಕು ಎಂಬ ಮಾತನ್ನು ಎಲ್ಲರೂ ಒಪ್ಪುತ್ತಾರೆ’ ಎಂದರು. ‘ಯುವಕರ ಸಂಖ್ಯೆ ಹೆಚ್ಚಿದ್ದಷ್ಟೂ, ಸಶಸ್ತ್ರ ಪಡೆಗಳಲ್ಲಿ ಸವಾಲು ಎದುರಿಸುವ ಉತ್ಸಾಹ ಹೆಚ್ಚುವುದು. ತಂತ್ರಜ್ಞಾನ ಬಳಕೆ ಬಗ್ಗೆ ಒಲವು ಹೊಂದಿರುವ ಯೋಧರು ಸಂಖ್ಯೆಯೂ ಹೆಚ್ಚಾಗಲಿದೆ’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.