8 ಟಿಎಂಸಿ ನಾಯಕರಿಗೆ ಮತ್ತೆ ಎನ್‌ಐಎ ನೋಟಿಸ್ ಕೋಲ್ಕತ್ತ: 2022ರಲ್ಲಿ ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ್‌ ಜಿಲ್ಲೆಯ ಭೂಪತಿನಗರದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಎಂಟು ನಾಯಕರಿಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತೊಮ್ಮೆ ನೋಟಿಸ್‌ ನೀಡಿದೆ. ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಶುಕ್ರವಾರ ನೋಟಿಸ್‌ ಜಾರಿ ಮಾಡಲಾಗಿದೆ. ಕಳೆದ ಬಾರಿ ಮಾ.28ರಂದು ಕೋಲ್ಕತ್ತದ ಎನ್‌ಐಎ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ 8 ನಾಯಕರಿಗೆ ನೋಟಿಸ್‌ ನೀಡಲಾಗಿತ್ತು. ಆದರೆ, ಎಲ್ಲರೂ ವಿಚಾರಣೆಗೆ ಗೈರುಹಾಜರಾಗಿದ್ದರು. ಅದರ ಬೆನ್ನಲ್ಲೇ ಶನಿವಾರ ಮುಂಜಾನೆ 11 ಗಂಟೆಗೆ ವಿಚಾರಣೆಗೆ ಬರುವಂತೆ ಮತ್ತೊಮ್ಮೆ ನೋಟಿಸ್‌ ನೀಡಲಾಗಿದೆ. ಎನ್‌ಐಎ ಕ್ರಮದ ಹಿಂದೆ ಬಿಜೆಪಿಯ ಕೈವಾಡವಿದೆ. ಬಿಜೆಪಿಯು ‍ಪುರ್ಬಾ ಮೇದಿನಿಪುರ್‌ದ ಟಿಎಂಸಿ ನಾಯಕರ ಪಟ್ಟಿಯನ್ನು ಎನ್‌ಐಎಗೆ ನೀಡಿದೆ. ಅಲ್ಲದೇ ಶನಿವಾರ ಟಿಎಂಸಿ ನಾಯಕರ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸಿ ಎಂದು ಬಿಜೆಪಿ ಸೂಚಿಸಿದೆ ಎಂದು ಟಿಎಂಸಿ ನಾಯಕ ಕುನಾಲ್‌ ಘೋಷ್‌ ಆರೋಪಿಸಿದ್ದಾರೆ. 2022ರ ಡಿ.3 ರಂದು ಪುರ್ಬಾ ಮೇದಿನಿಪುರದಲ್ಲಿ ಹುಲ್ಲಿನ ಚಾವಣಿಯಿದ್ದ ಮನೆಯೊಂದು ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.