ಬ್ಯಾಂಕ್‌ ಅಕೌಂಟ್‌ ಸ್ಥಗಿತ ಖಂಡಿಸಿ ಯುವ ಕಾಂಗ್ರೆಸ್‌ ಪ್ರತಿಭಟನೆ ನವದೆಹಲಿ: ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ಗೆ ನೋಟಿಸ್‌ ನೀಡಿರುವುದನ್ನು ವಿರೋಧಿಸಿ ಮತ್ತು ಕಾಂಗ್ರೆಸ್‌ನ ಬ್ಯಾಂಕ್‌ ಅಕೌಂಟ್‌ಗಳನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಭಾರತೀಯ ಯುವ ಕಾಂಗ್ರೆಸ್‌ (ಐವೈಸಿ) ನಾಯಕರು, ಕಾರ್ಯಕರ್ತರು ಶನಿವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ಐವೈಸಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯು, ರಾಜೇಂದ್ರ ಪ್ರಸಾದ್‌ ರಸ್ತೆಯೆಡೆಗೆ ಸಾಗದಂತೆ ಪೊಲೀಸರು ತಡೆದು, ಪ್ರತಿಭಟನೆನಿರತರನ್ನು ಬಂಧಿಸಿದರು. ಈ ವೇಳೆ ಮಾತನಾಡಿದ ಶ್ರೀನಿವಾಸ್, ‘ಕೇಂದ್ರ ಸರ್ಕಾರವು ವಿವಿಧ ಮಾರ್ಗಗಳ ಮೂಲಕ ಕಾಂಗ್ರೆಸ್‌ ಅನ್ನು ದುರ್ಬಲಗೊಳಿಸಲು ಸತತವಾಗಿ ಯತ್ನಿಸುತ್ತಿದೆ. ಆದರೆ ಇದಕ್ಕೆಲ್ಲ ಕಾಂಗ್ರೆಸ್‌ ಹೆದರುವುದಿಲ್ಲ’ ಎಂದರು. ‘ತೆರಿಗೆ ನಿಯಮಗಳ ನೆಪದಲ್ಲಿ ಕಾಂಗ್ರೆಸ್‌ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಲೋಕಸಭೆ ಚುನಾವಣೆ ಘೋಷಣೆಯಾಗಿರುವಾಗ ಕಾಂಗ್ರೆಸ್‌ ಪಕ್ಷದ ವಿರುದ್ಧ ಆದಾಯ ತೆರಿಗೆ ಇಲಾಖೆಯು ತಪ್ಪಾಗಿ ದಂಡ ವಿಧಿಸಿ, ಹಣ ಪಾವತಿಸುವಂತೆ ಹೇಳುತ್ತಿದೆ’ ಎಂದು ಅವರು ದೂರಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.