ಭದ್ರತೆ ದೃಷ್ಟಿಯಲ್ಲಿ ಪನ್ನೂ ಹತ್ಯೆ ತನಿಖೆ: ಎಸ್‌. ಜೈಶಂಕರ್‌ ನವದೆಹಲಿ: ‘ಭಾರತದ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯ ದೃಷ್ಟಿಯಿಂದ ಖಾಲಿಸ್ತಾನ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್‌ ಪನ್ನೂ ಹತ್ಯೆಯಲ್ಲಿ ದೇಶದ ಸರ್ಕಾರಿ ಅಧಿಕಾರಿ ಭಾಗಿಯಾಗಿದ್ದಾರೆ ಎಂಬ ಆರೋಪದ ತನಿಖೆ ನಡೆಯುತ್ತಿದೆ’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಸೋಮವಾರ ಹೇಳಿದ್ದಾರೆ. ‘ಮತ್ತೊಂದು ದೇಶದ ಪ್ರಜೆಯ ಹತ್ಯೆಯಲ್ಲಿ ಸರ್ಕಾರಿ ಅಧಿಕಾರಿಯೊಬ್ಬ ಭಾಗಿಯಾಗಿರುವುದು ಸ್ವೀಕಾರಾರ್ಹವಲ್ಲ’ ಎಂದು ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್‌ ಗ್ರಾಸೆಟ್ಟಿ ಅವರ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಮೆರಿಕ ರಾಯಭಾರಿ ಅವರು ತಮಗೆ ಏನನ್ನಿಸುತ್ತಿದೆಯೋ ಅದನ್ನು ಹೇಳುತ್ತಿದ್ದಾರೆ’ ಎಂದರು. ‘ಪನ್ನೂ ಹತ್ಯೆ ಪ್ರಕರಣದ ಕುರಿತು ಪ್ರಸ್ತುತ ನನ್ನ ದೇಶದ ಸ್ಥಿತಿ ಇದಾಗಿದೆ. ನಾವು ನಡೆಸುತ್ತಿರುವ ತನಿಖೆಯಿಂದ ಈಗಾಗಲೇ ಕೆಲವು ಮಾಹಿತಿಗಳು ತಿಳಿದುಬಂದಿವೆ. ಆದ್ದರಿಂದ ಈ ಪ್ರಕರಣದ ತನಿಖೆ ಏನೇ ಹೇಳುವುದಿದ್ದರೂ ಖುಷಿಯಿಂದ ಹೇಳುತ್ತೇವೆ. ಈ ಸಂದರ್ಭದಲ್ಲಿ, ತನಿಖೆ ಪ್ರಗತಿಯಲ್ಲಿದೆ ಎಂಬುದನ್ನು ಬಿಟ್ಟು ಬೇರೇನೂ ಹೇಳಲು ಸಾಧ್ಯವಿಲ್ಲ’ ಎಂದೂ ಅವರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.