ಲೈಂಗಿಕ ಕಿರುಕುಳ: ಮುಖ್ಯದ್ವಾರದ ಬಳಿ ವಿದ್ಯಾರ್ಥಿನಿ ಅನಿರ್ದಿಷ್ಟಾವಧಿ ಧರಣಿ ನವದೆಹಲಿ: ತನ್ನ ಮೇಲೆ ನಾಲ್ವರು ವ್ಯಕ್ತಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರ ವಿರುದ್ಧ ಇನ್ನೂ ಕ್ರಮವಾಗಿಲ್ಲ ಎಂದು ಆರೋಪಿಸಿರುವ ದೆಹಲಿಯ ಜವಾಹರ ಲಾಲ್ ನೆಹರು (ಜೆಎನ್‌ಯು) ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ಮಂಗಳವಾರ ಬೆಳಿಗ್ಗೆಯಿಂದ ವಿವಿಯ ಮುಖ್ಯದ್ವಾರದ ಬಳಿ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ. ‘ಮಾರ್ಚ್ 31ರಂದು ಕ್ಯಾಂಪಸ್‌ನ ಹಾಸ್ಟೆಲ್ ಬಳಿ ನಾಲ್ವರಿಂದ ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಅದರಲ್ಲಿ ಇಬ್ಬರು ಇದೇ ವಿವಿಯ ಹಳೇ ವಿದ್ಯಾರ್ಥಿಗಳು. ಆದರೆ, ಇದುವರೆಗೂ ಅವರ ವಿರುದ್ಧ ಕ್ರಮವಾಗಲಿ, ಬಂಧನವಾಗಲಿ ಆಗಿಲ್ಲ ಎಂದು ವಿದ್ಯಾರ್ಥಿನಿ ದೂರಿದ್ದಾರೆ. ಈ ಕುರಿತು ಪಿಟಿಐಗೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಶಿಸ್ತುಪಾಲನಾಧಿಕಾರಿ ಸುಧೀರ್ ಕುಮಾರ್ ಅವರು, ವಿದ್ಯಾರ್ಥಿನಿಯ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಗಳಿಗೆ ಅವರ ಅಹವಾಲು ಸಲ್ಲಿಸಲು ಸಮಯ ನೀಡಲಾಗಿದೆ ಎಂದು ತಿಳಿಸಿದ್ದಾರೆ. ವಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿನಿ, ನನ್ನ ಮೇಲೆ ದೌರ್ಜನ್ಯ ನಡೆಸಿರುವವರನ್ನು ಮುಕ್ತವಾಗಿ ತಿರುಗಾಡಲು ಬಿಟ್ಟಿದ್ದಾರೆ ಎಂದು ಧರಣಿ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವವರು ಇಬ್ಬರು ಆರ್‌ಎಸ್‌ಎಸ್‌ ಸಂಘಟನೆ ಹಾಗೂ ಇಬ್ಬರು ಎಬಿವಿಪಿಗೆ ಸಂಬಂಧಿಸಿದವರಾಗಿದ್ದಾರೆ ಎಂದು ಜೆಎನ್‌ಯುನ ವಿದ್ಯಾರ್ಥಿ ಒಕ್ಕೂಟದ ಎಡಪಂಥೀಯ ನಾಯಕರು ಆರೋಪಿಸಿದ್ದಾರೆ. ಆದರೆ, ಇದನ್ನು ಎಬಿವಿಪಿ ತಳ್ಳಿ ಹಾಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.