ಎಸ್‌ಪಿ, ಕಾಂಗ್ರೆಸ್‌ಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ಬೇಕಿರಲಿಲ್ಲ: ಶಾ ಮುಜಾಫರನಗರ(ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ಗೆ ಬೇಕಿರಲಿಲ್ಲ. ಜನರ ಭಾವನೆಗಳನ್ನು ಗೌರವಿಸಿದ ನರೇಂದ್ರ ಮೋದಿ ಸರ್ಕಾರ, ದೇವಾಲಯ ನಿರ್ಮಿಸಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಸಂಜೀವ್ ಬಾಲಿಯಾನ್ ಪರ ಪ್ರಚಾರದಲ್ಲಿ ಪಾಲ್ಗೊಂಡ ಅವರು, ಕಾನೂನು ಮತ್ತು ಸುವ್ಯವಸ್ಥೆ ಉತ್ತಮಗೊಳಿಸುವ ಮೂಲಕ ಬಿಜೆಪಿ ಸರ್ಕಾರ ಪಶ್ಚಿಮ ಉತ್ತರ ಪ್ರದೇಶದಿಂದ ಜನ ವಲಸೆ ಹೋಗುವುದನ್ನು ತಡೆದಿದೆ. ಈಗ ಕ್ರಿಮಿನಲ್‌ಗಳು ರಾಜ್ಯ ತೊರೆಯುತ್ತಿದ್ದಾರೆ ಎಂದರು. ‌ ‘ಅಖಿಲೇಶ್ ಯಾದವ್ ಅವರ ಪಕ್ಷ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ಬೇಕಿರಲಿಲ್ಲ. ರಾಮ ಜನ್ಮಭೂಮಿ ವಿವಾದವನ್ನು ಕಾಂಗ್ರೆಸ್ 71 ವರ್ಷಗಳ ಕಾಲ ಜೀವಂತವಾಗಿರಿಸಿಕೊಂಡಿತ್ತು. ಆದರೆ, ಮೋದಿ ಪ್ರಕರಣವನ್ನು ಗೆದ್ದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ನೆರವೇರಿಸಿದರು’ ಎಂದೂ ಅವರು ಹೇಳಿದ್ದಾರೆ. ‘ಇಂಡಿಯಾ’ ಬಣವನ್ನು ತರಾಟೆಗೆ ತೆಗೆದುಕೊಂಡ ಅವರು, ವಿರೋಧ ಪಕ್ಷಗಳ ಬಣದಲ್ಲಿರುವ ಪ್ರತಿಯೊಬ್ಬರೂ ಹಗರಣಗಳಲ್ಲಿ ಮುಳುಗಿದ್ದಾರೆ ಎಂದರು. 'ದುರಹಂಕಾರದಿಂದ ಕೂಡಿದ ಇಂಡಿಯಾ ಬಣದಲ್ಲಿರುವ ಎಲ್ಲರೂ ಹಗರಣಗಳಲ್ಲಿ ಮುಳುಗಿದ್ದಾರೆ. ಅವರು ಮಾಡಿರುವ ಭ್ರಷ್ಟಾಚಾರದ ಮೊತ್ತ ₹12 ಲಕ್ಷ ಕೋಟಿಯಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಎಸಗಿದವರು ಜೈಲಿಗೆ ಹೋಗುತ್ತಾರೆ ಎಂದು 2014ರಲ್ಲಿ ಮೋದಿ ಹೇಳಿದ್ದರು. 2024ರಲ್ಲೂ ಅವರು ಅದೇ ಹೇಳುತ್ತಿದ್ದಾರೆ ಎಂದು ಶಾ ಒತ್ತಿ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.