ಚುನಾವಣಾ ಬಾಂಡ್‌ ಯೋಜನೆ ಒಂದು ‘ಪ್ರಯೋಗ’ ಆಗಿದೆ: ದತ್ತಾತ್ರೇಯ ಹೊಸಬಾಳೆ ನವದೆಹಲಿ: ಚುನಾವಣಾ ಬಾಂಡ್‌ ಯೋಜನೆ ಒಂದು ‘ಪ್ರಯೋಗ’ ಆಗಿದ್ದು, ಅದು ಎಷ್ಟು ಪರಿಣಾಮಕಾರಿ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಚುನಾವಣಾ ಬಾಂಡ್‌ಗೆ ಸಂಬಂಧಿಸಿ ವ್ಯಕ್ತವಾಗಿರುವ ಕಳವಳಗಳ ಬಗ್ಗೆ ಕೇಳಿದಾಗ ಹೊಸಬಾಳೆ, ‘ಯೋಜನೆಯು ಪ್ರಾಯೋಗಿಕ ಹಂತದಲ್ಲಿರುವುದರಿಂದ ಸಂಘವು ಅದರ ಬಗ್ಗೆ ಇನ್ನೂ ಚರ್ಚಿಸಿಲ್ಲ’ ಎಂದು ಉತ್ತರಿಸಿದರು. ‘ಚುನಾವಣಾ ಬಾಂಡ್‌ ಅನ್ನು ಇದ್ದಕ್ಕಿದ್ದಂತೆ ಪರಿಚಯಿಸಲಾಗಿಲ್ಲ. ಅಂತಹದೇ ಯೋಜನೆಯನ್ನು ಈ ಹಿಂದೆಯೂ ಜಾರಿಗೆ ತರಲಾಗಿತ್ತು. ಒಂದು ವ್ಯವಸ್ಥೆಯಲ್ಲಿ ಬದಲಾವಣೆ ತಂದಾಗ, ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಇವಿಎಂಗಳನ್ನು (ವಿದ್ಯುನ್ಮಾನ ಮತಯಂತ್ರಗಳು) ಪರಿಚಯಿಸಿದಾಗಲೂ ಪ್ರಶ್ನೆಗಳು ಎದ್ದಿದ್ದವು’ ಎಂದು ಇನ್ನೊಂದು ಅವಧಿಗೆ ಸಂಘದ ಸರಕಾರ್ಯವಾಹ ಆಗಿ ಭಾನುವಾರ ಪುನರಾಯ್ಕೆಯಾದ ಅವರು ತಿಳಿಸಿದರು. ‘ಹೊಸ ಯೋಜನೆಯೊಂದು ಜಾರಿಗೆ ಬಂದಾಗ ಜನರಿಂದ ಪ್ರಶ್ನೆಗಳು ಏಳುವುದು ಸಹಜ. ಆದರೆ, ಹೊಸ ವ್ಯವಸ್ಥೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ಕಾಲವೇ ಹೇಳಬೇಕು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.