ನಿತಾಶಾ ಪ್ರಯಾಣಕ್ಕೆ ಅಡ್ಡಿ: ಮೆಹಬೂಬಾ ಮುಫ್ತಿ ಕಿಡಿ ಶ್ರೀನಗರ: ಬಿಜೆಪಿಯು ತನ್ನ ಟೀಕಾಕಾರರಿಗೆ ‘ಕಿರುಕುಳ ನೀಡಲು ಮತ್ತು ದಂಡನೆಗೆ ಒಳಪಡಿಸಲು’ ಪಾಸ್‌ಪೋರ್ಟ್‌ಗಳನ್ನು ‘ಅಸ್ತ್ರಗಳಾಗಿ’ ಬಳಸುತ್ತಿದ್ದು, ಪ್ರಯಾಣದ ಮೇಲೆ ‘ಅಕ್ರಮವಾಗಿ’ ನಿಷೇಧ ಹೇರುತ್ತಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೋಮವಾರ ಇಲ್ಲಿ ಆರೋಪಿಸಿದರು. ಬ್ರಿಟನ್‌ನ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ಭಾರತ ಮೂಲದ ನಿತಾಶಾ ಕೌಲ್ ಅವರನ್ನು ಬೆಂಗಳೂರು ವಿಮಾನನಿಲ್ದಾಣದಿಂದ ವಾಪಸು ಕಳುಹಿಸಿದ ಪ್ರಕರಣ ಉಲ್ಲೇಖಿಸಿ ಮೆಹಬೂಬಾ ಈ ಆರೋಪ ಮಾಡಿದ್ದಾರೆ. ಈ ಮೊದಲು ಆತೀಶ್‌ ತಾಸೀರ್, ಅಶೋಕ್‌ ಸ್ವೈನ್‌ ಅವರ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ ನಿತಾಶಾ ಕೌಲ್‌ ಅವರ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ದ್ವೇಷ ಸಿದ್ದಾಂತವನ್ನು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ನಿತಾಶಾ ಅವರಿಗೆ ಇಂತಹ ಕಿರುಕುಳ ನೀಡಲಾಗಿದೆ ಎಂದು ‘ಎಕ್ಸ್’ ಜಾಲತಾಣದಲ್ಲಿ ಸಂದೇಶ ಪೋಸ್ಟ್‌ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.