ಸೈಬರ್ ಹೂಡಿಕೆ: ಮುಂಬೈ ಉದ್ಯಮಿಗೆ ₹3.61 ಕೋಟಿ ವಂಚನೆ ಮುಂಬೈ: ಆನ್‌ಲೈನ್ ಹೂಡಿಕೆ ಸಂಬಂಧ ಹಿರಿಯ ಉದ್ಯಮಿಗೆ ₹3.61 ಕೋಟಿ ವಂಚಿಸಿದ ಆರೋಪದ ಮೇಲೆ ಗಾರ್ಮೆಂಟ್ ಘಟಕದ ಮಾಲೀಕರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ. ಬಂಧಿತನನ್ನು ಕೇತಾಬ್ ಅಲಿ ಕಬಿಲ್ ಬಿಸ್ವಾಸ್ ಎಂದು ಗುರುತಿಸಲಾಗಿದ್ದು, ವಂಚಕರು ಬಳಿಸಿದ 330 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಅವರ ಖಾತೆಗಳಿಂದ ₹2.20 ಕೋಟಿಯನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಮೂವರು ವ್ಯಕ್ತಿಗಳು ಕಳೆದ ವರ್ಷದ ಮೇ 20 ಮತ್ತು ಅಕ್ಟೋಬರ್ 7ರ ನಡುವೆ ಆನ್‌ಲೈನ್‌ನಲ್ಲಿ ಉದ್ಯಮಿಯನ್ನು ಸಂಪರ್ಕಿಸಿದ್ದರು. ಅವರು ಭಾರಿ ಮೊತ್ತದ ಲಾಭದ ಆಸೆ ತೋರಿಸಿ ಯೋಜನೆಯೊಂದರಲ್ಲಿ ಹಣ ತೊಡಗಿಸುವಂತೆ ಉದ್ಯಮಿಯ ಮನವೊಲಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವ್ಯವಹಾರದ ಸಂಬಂಧ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿದ್ದ ಅವರು ಆನ್‌ಲೈನ್ ಒಪ್ಪಂದವನ್ನು ಮಾಡಿ ಅದನ್ನು ಉದ್ಯಮಿಗೆ ಮೇಲ್ ಮೂಲಕ ಕಳಿಸಿದ್ದರು. ಅದರಂತೆ ಉದ್ಯಮಿ ₹3.61 ಕೋಟಿ ಹೂಡಿಕೆ ಮಾಡಿದ್ದರು. ಆದರೆ, ಯಾವುದೇ ಹಣ ವಾಸಪ್ ಬಾರದಿದ್ದಾಗ ಅವರು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಪಶ್ಚಿಮ ವಲಯ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಂಚನೆ, ನಕಲು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.