ರಾಜ್ಯಸಭಾ ಚುನಾವಣೆ: ಮಾಕನ್‌, ಜಿಸಿಸಿ, ನಾಸೀರ್ ಹುಸೇನ್, ಭಾಂಡಗೆ ಗೆಲುವು ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್‌ನ ಅಜಯ್‌ ಮಾಕನ್‌, ಸೈಯದ್‌ ನಾಸಿರ್‌ ಹುಸೇನ್‌, ಜಿ.ಸಿ. ಚಂದ್ರಶೇಖರ್‌ ಮತ್ತು ಬಿಜೆಪಿಯ ನಾರಾಯಣಸಾ ಭಾಂಡಗೆ ಗೆಲುವು ಸಾಧಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್‌ನ ಡಿ. ಕುಪೇಂದ್ರ ರೆಡ್ಡಿ ಸೋಲು ಕಂಡಿದ್ದಾರೆ. 223 ಶಾಸಕರ ಪೈಕಿ ಬಿಜೆಪಿಯ ಅರಬೈಲ್‌ ಶಿವರಾಂ ಹೆಬ್ಬಾರ್‌ ಮತದಾನಕ್ಕೆ ಗೈರಾಗಿದ್ದರು. ಒಟ್ಟು 222 ಶಾಸಕರು ಮತ ಚಲಾಯಿಸಿದ್ದರು. ಅಜಯ್‌ ಮಾಕನ್‌, ನಾಸೀರ್‌ ಹುಸೇನ್‌ ಮತ್ತು ನಾರಾಯಣ ಸಾ ಭಾಂಡಗೆ ತಲಾ 47 ಮತಗಳನ್ನು ಪಡೆದಿದ್ದಾರೆ. ಜಿ.ಸಿ. ಚಂದ್ರಶೇಖರ್‌ 45 ಮತ ಪಡೆದಿದ್ದಾರೆ. ಕುಪೇಂದ್ರ ರೆಡ್ಡಿ 36 ಮತಗಳನ್ನು ಪಡೆಯಲಷ್ಟೇ ಸಾಧ್ಯವಾಗಿದೆ. ಕಾಂಗ್ರೆಸ್‌ನ ಎಲ್ಲ ಶಾಸಕರೂ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದಾರೆ. ಪಕ್ಷೇತರರಾದ ಲತಾ ಮಲ್ಲಿಕಾರ್ಜುನ, ಕೆ.ಎಚ್‌. ಪುಟ್ಟಸ್ವಾಮಿ ಗೌಡ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿ. ಜನಾರ್ದನ ರೆಡ್ಡಿ ಮತ್ತು ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್‌ ಪುಟ್ಟಣ್ಣಯ್ಯ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಬಿಜೆಪಿಯ ಎಸ್‌.ಟಿ. ಸೋಮಶೇಖರ್‌ ಪಕ್ಷದ ವಿಪ್‌ ಉಲ್ಲಂಘಿಸಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.