ಶಶಿ ತರೂರ್‌ ವಿರುದ್ಧ ರಾಜೀವ್‌ ಚಂದ್ರಶೇಖರ್‌ ಮಾನಹಾನಿ ನೋಟಿಸ್‌, ಕ್ಷಮೆಗೆ ಆಗ್ರಹ ತಿರುವನಂತಪುರ: ಟಿ.ವಿ ಚಾನೆಲ್‌ಗಳಲ್ಲಿ ತಮ್ಮ ಬಗ್ಗೆ ಮಾನಹಾನಿ ಹೇಳಿಕೆ ನೀಡಿದ ಆರೋಪದ ಮೇಲೆ ಶಶಿ ತರೂರ್‌ಗೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ನೋಟಿಸ್‌ ನೀಡಿದ್ದಾರೆ. ಇದೇ 26ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಚಂದ್ರಶೇಖರ್‌ ಅವರು ಕಾಂಗ್ರೆಸ್‌ನ ಶಶಿ ತರೂರ್‌ ಅವರನ್ನು ತಿರುವನಂತಪುರದಲ್ಲಿ ಎದುರಿಸಲಿದ್ದಾರೆ. ‘ಬಿಜೆಪಿ ಅಭ್ಯರ್ಥಿ ಪ್ರಮುಖ ಮತದಾರರಿಗೆ, ಪ್ರಭಾವಿ ವ್ಯಕ್ತಿಗಳಿಗೆ ಲಂಚ ನೀಡುತ್ತಿದ್ದಾರೆ ಎಂದು ತರೂರ್‌ ಅವರು ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ತರೂರ್‌ ಅವರ ಹೇಳಿಕೆಯಿಂದ ನನ್ನ ಪ್ರತಿಷ್ಠೆಗೆ ಧಕ್ಕೆಯುಂಟಾಗಿದೆ. ತಿರುವನಂತಪುರದ ಕ್ರಿಶ್ಚಿಯನ್‌ ಸಮುದಾಯ ಮತ್ತು ಅದರ ಪ್ರಮುಖ ನಾಯಕರಿಗೆ ಅವಮಾನ ಮಾಡಿದ್ದಾರೆ. ಬಿಜೆಪಿಯ ಪ್ರಚಾರಕ್ಕೆ ಹಾನಿ ಮಾಡಿ ಲಾಭ ಪಡೆದುಕೊಳ್ಳುವ ಉದ್ದೇಶ ಹೊಂದಿದ್ದಾರೆ’ ಎಂದು ಆರೋಪಿಸಿದ್ದಾರೆ. ‘ಚಂದ್ರಶೇಖರ್ ವಿರುದ್ಧ ಮಾಡಲಾದ ಎಲ್ಲಾ ಆರೋಪಗಳನ್ನು ತಕ್ಷಣ ಹಿಂಪಡೆಯಬೇಕು. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಚಂದ್ರಶೇಖರ್‌ ಅವರಿಗೆ ಬೇಷರತ್ ಕ್ಷಮೆಯಾಚಿಸಬೇಕು. ಜತೆಗೆ ಮುಂದೆಂದೂ ಅವರ ವಿರುದ್ಧ ಮಾನಹಾನಿಯಂತಹ ಹೇಳಿಕೆಗಳನ್ನು ನೀಡಬಾರದು’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ನೋಟಿಸ್‌ ಸ್ವೀಕರಿಸಿದ 24 ಗಂಟೆಗಳ ಒಳಗೆ ಷರತ್ತುಗಳನ್ನು ಸ್ವೀಕರಿಸಲು ವಿಫಲವಾದರೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.