ಅಧಿಕಾರಕ್ಕೆ ಬಂದರೆ ರೈತರಿಗೆ ಎಂಎಸ್‌ಪಿ: ರಾಹುಲ್‌ ಗಾಂಧಿ ಭೋಪಾಲ್‌ (ಪಿಟಿಐ): ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ರೈತರ ಬೆಳೆಗಳಿಗೆ ಕಾನೂನುಬದ್ಧವಾಗಿ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನೀಡಲಾಗುವುದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದರು. ಮಧ್ಯಪ್ರದೇಶದ ಮೊರೇನಾದಲ್ಲಿ ‘ಭಾರತ್‌ ಜೋಡೊ ನ್ಯಾಯ ಯಾತ್ರೆ’ ಯಲ್ಲಿ ಮಾತನಾಡಿದ ಅವರು, ಈ ಭರವಸೆಯನ್ನು ಪಕ್ಷದ ಪ್ರಣಾಳಿಕೆಯು ಒಳಗೊಂಡಿದೆ ಎಂದೂ ಅವ‌ರು ತಿಳಿಸಿದರು. ಬಿಜೆಪಿ ನೇತೃತ್ವದ ಬಿಜೆಪಿ ಸರ್ಕಾರವು ದೊಡ್ಡ ಉದ್ಯಮಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರ ಹಿತಾಸಕ್ತಿಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು. ಜಾತಿ ಗಣತಿಯ ಬೇಡಿಕೆಯನ್ನು ಪುನರುಚ್ಚರಿಸಿದ ಅವರು, ಆರ್ಥಿಕತೆಯ ಹೆಚ್ಚಿನ ವಲಯಗಳಲ್ಲಿ ದೇಶದ ಜನಸಂಖ್ಯೆಯ ಶೇ73ರಷ್ಟು ಜನರ ಪ್ರಾತಿನಿಧ್ಯವಿಲ್ಲ ಎಂದಿದ್ದಾರೆ. ಗ್ವಾಲಿಯರ್‌ನಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ರಾಹುಲ್‌ ಅವರು, ಕೇಂದ್ರದಲ್ಲಿ ‘ಇಂಡಿಯಾ’ ಒಕ್ಕೂಟದ ಸರ್ಕಾರ ಅಧಿಕಾರಕ್ಕೇರಿದರೆ ಜಾತಿ ಗಣತಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು. ಕೇಂದ್ರದ ಬಿಜೆಪಿ ಸರ್ಕಾರವು ಕೆಲವು ಉದ್ಯಮಿಗಳ ₹16 ಲಕ್ಷ ಕೋಟಿಯ ಸಾಲವನ್ನು ಮನ್ನಾ ಮಾಡಿದೆ, ಆದರೆ ರೈತರಿಗೆ ಎಂಎಸ್‌ಪಿ ನೀಡಲು ನಿರಾಕರಿಸಿದೆ ಎಂದು ಟೀಕಿಸಿದರು. ಮೋದಿ ‘ಸ್ಪೀಡ್‌ ಬ್ರೇಕರ್’: ರಾಹುಲ್‌ ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಬೆಳವಣಿಗೆಯ ಹಾದಿಯಲ್ಲಿದ್ದ ದೇಶದ ಆರ್ಥಿಕತೆಗೆ ಅನಂತರ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ಪೀಡ್‌ ಬ್ರೇಕರ್‌’ ಆಗಿ ಪರಿಣಮಿಸಿದ್ದಾರೆ ಎಂದು ರಾಹುಲ್‌ ಗಾಂಧಿ ಶನಿವಾರ ಆರೋಪಿಸಿದ್ದಾರೆ. ಕಾಂಗ್ರೆಸ್‌ ಪಕ್ಷವು ಬಡವರ ಸಬಲೀಕರಣದ ಮೂಲಕ ಅಭಿವೃದ್ಧಿಗೆ ಒತ್ತು ನೀಡಿದರೆ ಮೋದಿ ಅವರು ತಮ್ಮ ಕೆಲವು ಮಿತ್ರರಿಗೆ ಅನುಕೂಲ ಮಾಡಿಕೊಡಲು ದೇಶವನ್ನು ಬರಿದಾಗಿಸುತ್ತಿದ್ದಾರೆ ಎಂ‌ದು ಎಕ್ಸ್‌ ವೇದಿಕೆಯಲ್ಲಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.