ತೆಲಂಗಾಣ | ಬಿಆರ್‌ಎಸ್‌, ಕಾಂಗ್ರೆಸ್‌ನಿಂದ ಲೂಟಿ: ಪ್ರಧಾನಿ ಮೋದಿ ಟೀಕೆ ಹೈದರಾಬಾದ್: ಕಾಂಗ್ರೆಸ್‌ ಮತ್ತು ಬಿಆರ್‌ಎಸ್‌ ಪಕ್ಷಗಳು ‘ಲೂಟಿ ಮಾಡುವ’ ಇತಿಹಾಸವನ್ನಷ್ಟೇ ಹೊಂದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು. ಅದಿಲಾಬಾದ್‌ನಲ್ಲಿ ಸೋಮವಾರ ಪಕ್ಷದ ಬೃಹತ್‌ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಇವೆರಡು ಪಕ್ಷಗಳಿಗೆ ವಿಭಿನ್ನ ಮುಖಗಳಿರಬಹುದು. ಆದರೆ ‘ಸುಳ್ಳು ಮತ್ತು ಲೂಟಿ’ ಈ ಪಕ್ಷಗಳ ಸಾಮಾನ್ಯ ಗುಣಗಳು’ ಎಂದು ವಾಗ್ದಾಳಿ ನಡೆಸಿದರು. ‘ತೆಲಂಗಾಣದಲ್ಲಿ ಬಿಆರ್‌ಎಸ್‌ ಅಧಿಕಾರದಲ್ಲಿದ್ದಾಗ ಕಾಳೇಶ್ವರಂ ಹಗರಣ ನಡೆಯಿತು. ಕಾಂಗ್ರೆಸ್‌ ಪಕ್ಷ, ಆ ಹಗರಣದ ತನಿಖೆ ನಡೆಸುವ ಬದಲು ಕಡತಗಳನ್ನು ಮುಚ್ಚಿಟ್ಟುಕೊಂಡು ಕುಳಿತಿದೆ. ನೀವು (ಬಿಆರ್‌ಎಸ್‌) ಲೂಟಿ ಮಾಡಿರುವುದರಿಂದ ನಾವೂ (ಕಾಂಗ್ರೆಸ್‌) ಲೂಟಿ ಮಾಡುತ್ತೇವೆ ಎಂಬುದು ಕಾಂಗ್ರೆಸ್‌ನ ಧೋರಣೆ’ ಎಂದು ಟೀಕಿಸಿದರು. ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಸಮೀಪಿಸುತ್ತಿರುವಂತೆಯೇ ವಿವಿಧ ರಾಜ್ಯಗಳಿಗೆ ಭೇಟಿ ನೀಡಲು ನಿರ್ಧರಿಸಿರುವ ಮೋದಿ ಅವರು, ತೆಲಂಗಾಣ ಭೇಟಿ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿದರು. ಅದಿಲಾಬಾದ್‌ನಲ್ಲಿ ಆಯೋಜಿಸಿದ್ದ ಎರಡು ಸಭೆಗಳಲ್ಲಿ ಪಾಲ್ಗೊಂಡರು. ಶಂಕುಸ್ಥಾಪನೆ: ಪ್ರಧಾನಿ ಅವರು ರಸ್ತೆ, ರೈಲು ಮತ್ತು ವಿದ್ಯುತ್‌ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಸುಮಾರು ₹ 56 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು. ‘ತೆಲಂಗಾಣ ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಸರ್ಕಾರ ಜತೆಯಾಗಿ 10 ವರ್ಷಗಳನ್ನು ಪೂರೈಸುತ್ತಿದೆ. ತೆಲಂಗಾಣದ ಜನರ ಕನಸುಗಳನ್ನು ನನಸಾಗಿಸಲು ನಮ್ಮಿಂದ (ಕೇಂದ್ರ) ಸಾಧ್ಯವಿರುವ ಎಲ್ಲ ನೆರವನ್ನೂ ನೀಡುತ್ತಿದ್ದೇವೆ’ ಎಂದು ಪ್ರಧಾನಿ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.