ಬಿಜೆಪಿ: ಟಿಕೆಟ್‌ ವಂಚಿತ ಛುರು ಸಂಸದ ಕಾಂಗ್ರೆಸ್‌ ಸೇರುವ ಸಾಧ್ಯತೆ ಜೈಪುರ: ಬಿಜೆಪಿಯು ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ರಾಜಸ್ಥಾನದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಟಿಕೆಟ್‌ ವಂಚಿತರಾದ ಛುರು ಜಿಲ್ಲೆಯ ಸಂಸದ ರಾಹುಲ್ ಕಸ್ವನ್‌ ಅವರು ಅವರು ಕಾಂಗ್ರೆಸ್‌ ಸೇರುವ ಅಥವಾ ಪಕ್ಷೇತರರಾಗಿ ಸ್ಫರ್ಧಿಸುವ ಸುಳಿವು ನೀಡಿದ್ದಾರೆ. ಟಿಕೆಟ್‌ ಕೈತಪ್ಪಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಸ್ವನ್‌ ಅವರು, ‘ನಾನು ಮಾಡಿರುವ ತಪ್ಪೇನು? ನನ್ನ ಪ್ರಾಮಾಣಿಕತೆಯ ಬಗ್ಗೆ ಅನುಮಾನವೇ? ನಾನು ನನ್ನ ಕ್ಷೇತ್ರದ ಜನರ ಒಳಿತಿಗಾಗಿ ಕಷ್ಟಪಟ್ಟಿದ್ದೇನೆ. ಪ್ರಧಾನಿ ಮೋದಿಯವರ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸಿದ್ದೇನೆ. ನನ್ನ ಪ್ರಶ್ನೆಗಳಿಗೆ ಯಾರಲ್ಲೂ ಉತ್ತರವಿಲ್ಲ. ಎಲ್ಲರೂ ಮೌನವಾಗಿದ್ದರೆ’ ಎಂದು ಬೇಸರ ವ್ಯಕ್ತಪಡಿಸಿದರು. ಎರಡು ಬಾರಿ ಸಂಸದರಾಗಿರುವ ಕಸ್ವನ್‌ ಅವರ ಬದಲಿಗೆ ಈ ಬಾರಿ ದೇವೆಂದ್ರ ಝಾಝರಿಯ ಅವರಿಗೆ ಛುರು ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್‌ ಈಗಾಗಲೇ ಕಸ್ವನ್‌ ಅವರನ್ನು ಸಂಪರ್ಕಿಸಿದೆ ಎಂದು ಮೂಲಗಳು ತಿಳಿಸಿವೆ. ‘ಕಸ್ವನ್‌ ಕಾಂಗ್ರೆಸ್‌ಗೆ ಬಂದರೆ. ಅವರ ಗೆಲುವು ಖಚಿತ’ ಎಂದು ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಬಿಶ್ನರಾಮ್‌ ತಿಳಿಸಿದ್ದಾರೆ. ಕಸ್ವನ್‌ ಅವರು ಪಕ್ಷೇತರರಾಗಿ ಸ್ಫರ್ಧಿಸುವ ಸಾಧ್ಯತೆಗಳಿವೆ ಎಂದು ಕೆಲ ಮೂಲಗಳು ಹೇಳಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.