ಸಂದೇಶ್‌ಖಾಲಿ: ಶಹಜಹಾನ್‌ಗೆ ಸೇರಿದ ₹12 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ ನವದೆಹಲಿ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಮತ್ತು ಅಮಾನತುಗೊಂಡಿರುವ ಟಿಎಂಸಿ ನಾಯಕ ಶಹಜಹಾನ್ ಶೇಖ್‌ ಅವರಿಗೆ ಸೇರಿದ ₹12.78 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿರುವುದಾಗಿ ಮಂಗಳವಾರ ಜಾರಿ ನಿರ್ದೇಶನಾಲಯ(ಇ.ಡಿ) ಹೇಳಿದೆ. ಬ್ಯಾಂಕ್ ಠೇವಣಿ, ಕೋಲ್ಕತ್ತ ಮತ್ತು ಸಂದೇಶ್‌ಖಾಲಿಯಲ್ಲಿರುವ ಅಪಾರ್ಟ್‌ಮೆಂಟ್, ಕೃಷಿ ಭೂಮಿ ಮತ್ತು ಮೀನುಗಾರಿಕಾ ಜಾಗಗಳು ಇದರಲ್ಲಿ ಸೇರಿವೆ ಎಂದು ಇ.ಡಿ ಹೇಳಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್‌ಎ) ಈ ಸಂಬಂಧ ಇ.ಡಿ ಆದೇಶ ಹೊರಡಿಸಿದೆ. ಜನವರಿ 5ರಂದು ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ಇ.ಡಿ ತಂಡದ ಮೇಲೆ ಶೇಖ್ ಬೆಂಬಲಿಗರು ದಾಳಿ ಮಾಡಿದ ಆರೋಪವಿದೆ. ಪ್ರಕರಣ ಸಂಬಂಧ ಫೆಬ್ರುವರಿ 29ರಂದು ಪಶ್ಚಿಮ ಬಂಗಾಳ ಪೊಲೀಸರು ಶೇಖ್ ಅವರನ್ನು ಬಂಧಿಸಿದ್ದರು. ಬಂಧನದ ಬಳಿಕ ಅವರನ್ನು ಟಿಎಂಸಿಯಿಂದ ಅಮಾನತು ಮಾಡಲಾಗಿತ್ತು. ಟಿಎಂಸಿ ನಾಯಕ ಶಹಜಹಾನ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂದೇಶ್‌ಖಾಲಿಯ ಹಲವು ಮಹಿಳೆಯರು ಆರೋಪಿಸಿದ್ದು, ಅಕ್ರಮವಾಗಿ ರೈತರ ಭೂಮಿ ವಶಪಡಿಸಿಕೊಂಡ ಆರೋಪವೂ ಅವರ ಮೇಲಿದೆ. ಹೈಕೋರ್ಟ್ ಆದೇಶದ ಮೇರೆಗೆ ಶೇಖ್ ಅವರನ್ನು ಇಂದು ಸಿಬಿಐ ವಶಕ್ಕೆ ಒಪ್ಪಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.