ರಾಜಕೀಯದಲ್ಲಿ ಎಲ್ಲವೂ ಸಾಧ್ಯ: ವಿಕ್ರಮಾದಿತ್ಯ ಸಿಂಗ್‌ ಶಿಮ್ಲಾ: ‘ರಾಜಕೀಯದಲ್ಲಿ ಎಲ್ಲವೂ ಸಾಧ್ಯ. ಎಲ್ಲ ಬಾಗಿಲುಗಳು ತೆರೆದೇ ಇವೆ’ ಎಂದು ಹಿಮಾಚಲ ಪ್ರದೇಶದ ಲೋಕೋಪಯೋಗಿ ಇಲಾಖೆ ಸಚಿವ ವಿಕ್ರಮಾದಿತ್ಯ ಸಿಂಗ್‌ ಬುಧವಾರ ಹೇಳಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಅಡಿ ವಿಧಾನಸಭೆಯಿಂದ ಅನರ್ಹಗೊಂಡ ಕಾಂಗ್ರೆಸ್‌ನ ಬಂಡಾಯ ಶಾಸಕರೊಂದಿಗೆ ಕೆಲ ದಿನಗಳ ಹಿಂದೆ ಸಭೆ ನಡೆದಿದ್ದು, ‘ಅನರ್ಹಗೊಂಡ ಶಾಸಕರು ಪಕ್ಷಕ್ಕೆ ಮರಳಲಿದ್ದಾರೆಯೇ’ ಎಂದು ಕೇಳಲಾದ ಪ್ರಶ್ನೆಗೆ ವಿಕ್ರಮಾದಿತ್ಯ ಅವರು ಈ ಉತ್ತರ ನೀಡಿದ್ದಾರೆ. ಇತ್ತೀಚೆಗೆ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಆರು ಬಂಡಾಯ ಶಾಸಕರು ಅಡ್ಡ ಮತದಾನ ಮಾಡಿದ್ದರು. ಇದರಿಂದ ಪಕ್ಷದ ಅಧಿಕೃತ ಅಭ್ಯರ್ಥಿ ಸೋಲು ಅನುಭವಿಸಿದ್ದರು. ಬಂಡಾಯ ಶಾಸಕರ ಈ ನಡೆಯಿಂದ ಬಿಕ್ಕಟ್ಟು ಉದ್ಭವಿಸಿತ್ತು. ಬಳಿಕ ಸ್ಪೀಕರ್‌ ಕುಲದೀಪ್‌ ಸಿಂಗ್‌ ಪಠಾನಿಯಾ ಅವರು, ರಾಜ್ಯ ಬಜೆಟ್‌ ಮತದಾನದ ವೇಳೆ ಪಕ್ಷದ ವಿಪ್‌ ಉಲ್ಲಂಘಿಸಿದ ಆರೋಪದ ಮೇಲೆ ಈ ಶಾಸಕರನ್ನು ಅನರ್ಹಗೊಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.