ಕಾಂಗ್ರೆಸ್‌ ವಕ್ತಾರ ಗೌರವ್‌ ವಲ್ಲಭ್‌ ಬಿಜೆಪಿಗೆ ಸೇರ್ಪಡೆ ನವದೆಹಲಿ: ಕಾಂಗ್ರೆಸ್‌ ವಕ್ತಾರರ ‘ಪಕ್ಷಾಂತರ’ ಸರಣಿ ಮುಂದುವರಿದಿದ್ದು, ಗೌರವ್‌ ವಲ್ಲಭ್‌ ಅವರು ಗುರುವಾರ ಬಿಜೆಪಿ ಸೇರಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ರಾಜೀನಾಮೆ ಪತ್ರವನ್ನು, ಗೌರವ್‌ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು. ಅದರ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡರು. ‘ಸನಾತನ ವಿರೋಧಿ ಘೋಷಣೆಗಳನ್ನು ಮೊಳಗಿಸಲು ನನ್ನಿಂದ ಸಾಧ್ಯವಿಲ್ಲ. ಅದೇ ರೀತಿ, ಸಂಪತ್ತು ಸೃಷ್ಟಿಸುವವರನ್ನು ಪ್ರತಿ ದಿನವೂ ತೆಗಳಲು ಆಗದು. ಹೀಗಾಗಿ ಪಕ್ಷದ ಎಲ್ಲ ಹುದ್ದೆಗಳಿಗೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ. ಬಿಹಾರ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಅನಿಲ್‌ ಶರ್ಮಾ ಮತ್ತು ಆರ್‌ಜೆಡಿ ಮುಖಂಡ ಉಪೇಂದ್ರ ಪ್ರಸಾದ್‌ ಅವರೂ ಗುರುವಾರ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕಮಲ ಪಕ್ಷ ಸೇರಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.