ಭಾರತದ ಗಡಿ ನುಸುಳಲು ಯತ್ನ: ಪಾಕ್ ಪ್ರಜೆ ಹತ್ಯೆ ಜೈಪುರ: ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಭಾರತದೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ಶಂಕಿತ ಪಾಕಿಸ್ತಾನ ಮೂಲದ ನುಸುಳುಕೋರನನ್ನು ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧರು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಬಿಎಸ್ಎಫ್‌ನ ಸುಂದರಪುರ ಪೋಸ್ಟ್‌ ಬಳಿ ಗುರುವಾರ ರಾತ್ರಿ ಪಾಕಿಸ್ತಾನದ ಕಡೆಯಿಂದ ಬರುತ್ತಿದ್ದ ವ್ಯಕ್ತಿಯು ಗಸ್ತು ತಿರುಗುತ್ತಿದ್ದ ಯೋಧರ ಕಣ್ಣಿಗೆ ಬಿದ್ದಿದ್ದಾನೆ. ಈ ವೇಳೆ ಆ ವ್ಯಕ್ತಿಗೆ ಮುಂದೆ ಬರದೆ, ವಾಪಸ್ ಹೋಗುವಂತೆ ಸೂಚಿಸಿದ್ದಾರೆ. ಆದರೆ, ಯೋಧರ ಮಾತನ್ನು ನಿರ್ಲಕ್ಷಿಸಿ, ಮುನ್ನುಗ್ಗಿ ಬಂದಿದ್ದರಿಂದಾಗಿ ಆತನ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆ ಮಾಡಲಾಗಿದೆ ಎಂದು ಕೇಸರಿಸಿಂಹಪುರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೃತದೇಹವನ್ನು ಶವಾಗಾರದಲ್ಲಿ ಇಡಲಾಗಿದ್ದು, ಪಾಕಿಸ್ತಾನದ ವಶಕ್ಕೆ ನೀಡಲು ಆ ದೇಶದೊಂದಿಗೆ ಸಭೆ ನಿಗದಿಪಡಿಸಲಾಗುವುದು. ಒಂದು ವೇಳೆ ಪಾಕಿಸ್ತಾನ ಮೃತದೇಹ ಪಡೆಯಲು ನಿರಾಕರಿಸಿದರೆ, ಭಾರತದಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.