ದೆಹಲಿ: ಕೊಳವೆಬಾವಿಗೆ ಬಿದ್ದ ಯುವಕನ ಮೃತದೇಹ 12 ಗಂಟೆಗಳ ಬಳಿಕ ಹೊರಕ್ಕೆ ನವದೆಹಲಿ: ದೆಹಲಿ ಜಲ ಮಂಡಳಿಯ ನೀರು ಸಂಸ್ಕರಣಾ ಘಟಕದ 40 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ 30 ವರ್ಷದ ವ್ಯಕ್ತಿಯ ಮೃತದೇಹವನ್ನು 12 ಗಂಟೆಗಳ ಕಾರ್ಯಾಚರಣೆಯ ಬಳಿಕ ಭಾನುವಾರ ಹೊರ ತೆಗೆಯಲಾಗಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ‘ಕೊಳವೆಬಾವಿಗೆ ಬಿದ್ದ ವ್ಯಕ್ತಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ಆ ವ್ಯಕ್ತಿ ಕೊಳವೆಬಾವಿ ಇದ್ದ ಕೋಣೆಗೆ ಹೇಗೆ ಪ್ರವೇಶಿಸಿದ್ದರು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ’ ಎಂದು ಸಚಿವೆ ಆತಿಶಿ ಭಾನುವಾರ ‘ಎಕ್ಸ್’ ಮಾಧ್ಯಮದಲ್ಲಿ ತಿಳಿಸಿದರು. ‘ವಕ್ತಿಯನ್ನು ರಕ್ಷಿಸಲು ಎನ್‌ಡಿಆರ್‌ಎಫ್ ಮತ್ತು ದೆಹಲಿಯ ಅಗ್ನಿಶಾಮಕ ದಳದ ಸಿಬ್ಬಂದಿ ಅವಿರತವಾಗಿ ಶ್ರಮಿಸಿದ್ದರು ಮತ್ತು ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದರು’ ಎಂದು ಅವರು ಹೇಳಿದರು. ಕೊಳವೆಬಾವಿಗೆ ವ್ಯಕ್ತಿಯೊಬ್ಬರು ಬಿದ್ದಿರುವ ಕುರಿತು ಶನಿವಾರ ರಾತ್ರಿ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು. ಬಳಿಕ ರಕ್ಷಣಾ ಕಾರ್ಯಾಚರಣೆ ನಡೆದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.