ಪಶ್ಚಿಮ ಬಂಗಾಳ | ನಾಮಪತ್ರ ಹಿಂಪಡೆಯುವವರೆಗೂ ಮೈತ್ರಿಗೆ ಅವಕಾಶ ಇದೆ: ಕಾಂಗ್ರೆಸ್ ನವದೆಹಲಿ: ನಾಮಪತ್ರ ಹಿಂಪಡೆಯುವ ದಿನದವರೆಗೂ ಮೈತ್ರಿಗೆ ಬಾಗಿಲು ತೆರೆದಿರಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಎಲ್ಲಾ 42 ಕ್ಷೇತ್ರಗಳಿಗೆ ಟಿಎಂಸಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಈ ಹೇಳಿಕೆ ಹೊರಬಿದ್ದಿದೆ. ‘ಟಿಎಂಸಿ ಜತೆ ಗೌರವಯುತ ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್ ತನ್ನ ಅಭಿಲಾಷೆಯನ್ನು ಪದೇ ಪದೇ ವ್ಯಕ್ತಪಡಿಸಿತ್ತು. ಯಾವುದೇ ಒಪ್ಪಂದಗಳು ಮಾತುಕತೆಯಿಂದಾಗಿ ಅಂತಿಮಗೊಳ್ಳಬೇಕೇ ವಿನಾ ಏಕಪಕ್ಷೀಯ ಘೋಷಣೆಗಳಿಂದಲ್ಲ. ಬಿಜೆಪಿ ವಿರುದ್ಧ ಇಂಡಿಯಾ ಒಕ್ಕೂಟ ಒಗ್ಗಟ್ಟಾಗಿ ಹೋರಾಟ ಮಾಡುವುದನ್ನು ಕಾಂಗ್ರೆಸ್ ಯಾವತ್ತೂ ಬಯಸುತ್ತದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ಸಂಬಂಧ ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಎರಡಕ್ಕಿಂತ ಹೆಚ್ಚಿನ ಸೀಟು ನೀಡಲಾಗುವುದಿಲ್ಲ ಎಂದು ಟಿಎಂಸಿ ಪಟ್ಟು ಹಿಡಿದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.