ಅಪಮಾನವಾದರೆ ನಮ್ಮೊಂದಿಗೆ ಸೇರಿ, ಗೆಲುವು ಖಚಿತಪಡಿಸುತ್ತೇವೆ: ಗಡ್ಕರಿಗೆ ಉದ್ಧವ್ ಯವತ್ಮಾಲ್: ಬಿಜೆಪಿ ಪಕ್ಷ ತೊರೆಯುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮಗದೊಮ್ಮೆ ಒತ್ತಾಯಿಸಿದ್ದಾರೆ. ಅಲ್ಲದೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗಡ್ಕರಿ ಗೆಲುವನ್ನು ನಾವು ಖಚಿತಪಡಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಪೂರ್ವ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಆರೋಪದಲ್ಲಿ ಬಿಜೆಪಿಯಿಂದಲೇ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ನ ಮಾಜಿ ನಾಯಕ ಕೃಪಾಶಂಕರ್ ಸಿಂಗ್ ಅವರಂತವರ ಹೆಸರು ಪಕ್ಷ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಾಣಿಸಿಕೊಂಡಿದೆ ಎಂದು ಟೀಕಿಸಿದರು. ನಾನಿದನ್ನು ಎರಡು ದಿನಗಳ ಹಿಂದೆಯೇ ಗಡ್ಕರಿಗೆ ಹೇಳಿದ್ದೇನೆ. ಮತ್ತೆ ಅದನ್ನೇ ಪುನರಾವರ್ತಿಸುತ್ತಿದ್ದೇನೆ. ನಿಮಗೆ ಅಪಮಾನವಾಗುತ್ತಿದ್ದರೆ ಬಿಜೆಪಿಯನ್ನು ತೊರೆದು ಮಹಾ ವಿಕಾಸ ಅಘಾಡಿ ಜತೆ ಸೇರಿಕೊಳ್ಳಿ. ನಿಮ್ಮ ಗೆಲುವನ್ನು ನಾವು ಖಾತ್ರಿಪಡಿಸುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದರು. 'ಪೌರತ್ವ ತಿದ್ದುಪಡಿ ಕಾಯ್ದೆ'ಯನ್ನು ಚುನಾವಣೆಯನ್ನು ಗುರಿಯಾಗಿಸಿಕೊಂಡು ಜಾರಿ ಮಾಡಲಾಗಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಮೊದಲು ಕಾಶ್ಮೀರ ಪಂಡಿತರವನ್ನು ಕಾಶ್ಮೀರಕ್ಕೆ ಕರೆದು ತರಲಿ. ಆ ಬಳಿಕ ಸಿಎಎ ಜಾರಿ ಮಾಡಲಿ ಎಂದು ಸವಾಲು ಹಾಕಿದರು. ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕಿ ಸಂವಿಧಾನ ಬದಲಿಸಲು ಬಿಜೆಪಿ ಮುಂದಾಗಿದೆ. ಈ ಚುನಾವಣೆಯು 'ದೇಶಭಕ್ತ' ಮತ್ತು 'ದ್ವೇಷಭಕ್ತ'ರ ನಡುವೆಯಾಗಿದೆ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.