ದೆಹಲಿಯಲ್ಲಿ ಇಂದು ‘ರೈತರ ಮಹಾಪಂಚಾಯತ್’ ನವದೆಹಲಿ: ಕೆಲವು ನಿಬಂಧನೆಗಳಿಗೆ ಒಳಪಟ್ಟು, ಇಲ್ಲಿನ ರಾಮಲೀಲಾ ಮೈದಾನದಲ್ಲಿ ಗುರುವಾರ ‘ಕಿಸಾನ್‌ ಮಜದೂರ್‌ ಮಹಾಪಂಚಾಯತ್‌’ ಆಯೋಜನೆಗೆ ದೆಹಲಿ ಪೊಲೀಸರು ರೈತರಿಗೆ ಅನುಮತಿ ನೀಡಿದ್ದಾರೆ. ರೈತ ಸಂಘಟನೆಗಳ ಒಕ್ಕೂಟ ‘ಸಂಯುಕ್ತ ಕಿಸಾನ್‌ ಮೋರ್ಚಾ’ ಈ ‘ಮಹಾಪಂಚಾಯತ್‌’ ಆಯೋಜನೆ ಮಾಡಿದೆ. ‘ಸಮಾವೇಶದಲ್ಲಿ 5 ಸಾವಿರಕ್ಕಿಂತ ಹೆಚ್ಚು ಜನರು ಸೇರಬಾರದು. ಟ್ರ್ಯಾಕ್ಟರ್ ಟ್ರಾಲಿಗಳ ರ‍್ಯಾಲಿ ನಡೆಸಬಾರದು ಹಾಗೂ ರಾಮಲೀಲಾ ಮೈದಾನದಲ್ಲಿ ಮೆರವಣಿಗೆ ನಡೆಸಬಾರದು ಎಂಬುದು ಸೇರಿದಂತೆ ಹಲವು ನಿಬಂಧನೆಗಳನ್ನು ವಿಧಿಸಿ, ಅನುಮತಿ ನೀಡಲಾಗಿದೆ’ ಎಂದು ಡಿಸಿಪಿ(ಕೇಂದ್ರೀಯ) ಎಂ.ಹರ್ಷವರ್ಧನ್‌ ತಿಳಿಸಿದ್ದಾರೆ. ‘ಮಹಾಪಂಚಾಯತ್‌ ನಡೆಯಲಿರುವ ಸ್ಥಳಕ್ಕೆ ಆಯುಧಗಳನ್ನು ಮತ್ತು ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ಬರುವುದಿಲ್ಲ. ನಗರದಲ್ಲಿ ಯಾವುದೇ ಮೆರವಣಿಗೆ ನಡೆಸುವುದಿಲ್ಲ ಎಂಬುದಾಗಿ ರೈತರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. ‘ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ, 2.30 ನಂತರ ಮೈದಾನ ತೊರೆಯುವಂತೆ ರೈತರಿಗೆ ಸೂಚಿಸಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.