‌ಪ್ರಮುಖ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಕಡಿಮೆ: ರಾಹುಲ್‌ ಗಾಂಧಿ ಪಾಲ್ಘರ್‌: ಆಡಳಿತ, ನ್ಯಾಯಾಂಗ ಮತ್ತು ಮಾಧ್ಯಮ ಕ್ಷೇತ್ರಗಳು ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ದೇಶದ ಜನಸಂಖ್ಯೆಯ ಶೇ 88 ರಷ್ಟಿರುವ ದಲಿತ, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಜನರ ಪ್ರಾತಿನಿಧ್ಯ ತುಂಬಾ ಕಡಿಮೆ ಇದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಹೇಳಿದರು. ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ವಾಡಾದಲ್ಲಿ ‘ಭಾರತ್‌ ಜೋಡೊ ನ್ಯಾಯ ಯಾತ್ರೆ’ಯ ಅಂಗವಾಗಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಜನಸಂಖ್ಯೆಯ ಕೇವಲ ಶೇ 6ರಷ್ಟಿರುವ ಜನರು ಮಾತ್ರ ಅಧಿಕಾರ ಮತ್ತು ದೇಶದ ಸಂಪತ್ತನ್ನು ನಿಯಂತ್ರಿಸುತ್ತಾರೆ ಎಂದರು. ಸರ್ಕಾರವು ಖಾಸಗಿ ವಿಮಾ ಕಂಪನಿಗಳ ಮೂಲಕ ಜಾರಿಗೊಳಿಸಿರುವ ಬೆಳೆ ವಿಮೆ ಯೋಜನೆಯಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂದೂ ಹೇಳಿದರು. ಮಳೆ, ಆಲಿ‌ಕಲ್ಲು ಮಳೆಗೆ ಬೆಳೆ ನಾಶವಾದರೆ ಸರ್ಕಾರ ದೊಡ್ಡ ಮೊತ್ತದ ವಿಮಾ ಕಂತು ಪಾವತಿಸುವ ಕಂಪನಿಗಳು ರೈತರ ನೆರವಿಗೆ ಬರುವುದಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಜಾತಿ‌ಗಣತಿ ನಡೆಸಲಾಗುವುದು ಎಂದು ರಾಹುಲ್‌ ಅವರು ಪುನರುಚ್ಚರಿಸಿದರು. ಹಿಂದುಳಿದ ವರ್ಗದವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ರಾಹುಲ್‌ ಅವರು, ‘ಜಿಎಸ್‌ಟಿ ಹೆಸರಿನಲ್ಲಿ ಬಡವರನ್ನು ಲೂಟಿ ಮಾಡಲಾಗಿದೆ’ ಎಂದು ಆರೋಪಿಸಿದರು. ಜನವರಿ 14ರಂದು ಮಣಿಪುರದಿಂದ ಆರಂಭವಾಗಿರುವ ಯಾತ್ರೆಯು ಇದೇ 17ರಂದು ಸಮಾರೋಪಗೊಳ್ಳಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.