ಇಂತಹ ಪ್ರಧಾನಿಯನ್ನು ಹಿಂದೆಂದೂ ಕಂಡಿಲ್ಲ: ಶರದ್ ಪವಾರ್ ಕೊಲ್ಹಾಪುರ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಎನ್‌ಸಿಪಿ(ಎಸ್‌ಸಿಪಿ) ಮುಖ್ಯಸ್ಥ ಶರದ್ ಪವಾರ್, ಪ್ರಧಾನಿ ಅವರ ಭಾಷಣಗಳು ಸತ್ಯ ಮತ್ತು ವಾಸ್ತವವನ್ನು ಆಧರಿಸಿಲ್ಲ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಮಾತನಾಡುವುದಿಲ್ಲ. ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಸದಾ ಪ್ರಯತ್ನಿಸುತ್ತಾರೆ’ ಎಂದು ಆರೋಪಿಸಿದರು. ‘ಇಂತಹ ಪ್ರಧಾನಿಯನ್ನು ಹಿಂದೆಂದೂ ನಾನು ಕಂಡಿಲ್ಲ. ಅವರ ಯಾವ ಭಾಷಣಗಳು ವಾಸ್ತವದಿಂದ ಕೂಡಿರುವುದಿಲ್ಲ. ನನ್ನನ್ನು ಮತ್ತು ಉದ್ಧವ್ ಠಾಕ್ರೆಯನ್ನು ಗುರಿಯಾಗಿಸಿಕೊಂಡು ಭಾಷಣ ಮಾಡುವುದರಲ್ಲಿ ಅವರಿಗೆ ತೃಪ್ತಿಯಿದೆ’ ಎಂದರು. ‘ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಧರ್ಮದ ಆಧಾರದ ಮೇಲೆ ಮೀಸಲಾತಿ ತರುತ್ತದೆ ಎಂದು ಮೋದಿ ಆಗಾಗ್ಗೆ ಹೇಳುತ್ತಿರುವುದು ಸಾಮಾಜಿಕ ಉದ್ವಿಗ್ನತೆಯನ್ನು ಉಂಟುಮಾಡುವ ಪ್ರಯತ್ನವಾಗಿದೆ. ಇದು ಮೋದಿಯವರ ಸೃಷ್ಟಿಯಾಗಿದ್ದು, ಇಂತಹ ಭರವಸೆಯನ್ನು ನಾವು ನೀಡಿಯೇ ಇಲ್ಲ’ ಎಂದರು. ಇದೇ ವೇಳೆ ಮಹಾರಾಷ್ಟ್ರದಲ್ಲಿ ಐದು ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಪವಾರ್, ‘ಅಧಿಕಾರದಲ್ಲಿದ್ದರು ಆತಂಕಗೊಂಡಿದ್ದು, ಮೋದಿ ಅವರು ಸಾಕಷ್ಟು ಪ್ರಚಾರ ಮಾಡಲಿ ಎಂಬ ಉದ್ದೇಶದಿಂದ ಹೀಗೆ ಮಾಡಲಾಗಿದೆ’ ಎಂದು ಕಿಡಿಕಾರಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.