ಜನ್ಮತಃ ಕಿವುಡ, ಮೂಕ ವ್ಯಕ್ತಿಯಿಂದ ಪಾದ್ರಿಯಾಗಿ ಪ್ರತಿಜ್ಞೆ: ಹೊಸ ಇತಿಹಾಸ ತಿರುವನಂತಪುರ: ಕೇರಳದ ತ್ರಿಶ್ಶೂರ್‌ನ ಸಿರೊ ಮಲಬಾರ್ ಕ್ಯಾಥೊಲಿಕ್‌ ಚರ್ಚ್‌ನ ಪಾದ್ರಿಯಾಗಿ ಜೋಸೆಫ್‌ ಥೆರ್ಮಾಡೊಮ್‌ ಅವರು ಗುರುವಾರ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಹೊಸ ದಾಖಲೆ ಸೃಷ್ಟಿಯಾಯಿತು. ತ್ರಿಶ್ಶೂರ್‌ ನಿವಾಸಿಯಾಗಿರುವ ಥೆರ್ಮಾಡೊಮ್ ಅವರು ಹುಟ್ಟಿನಿಂದಲೇ ಮೂಕ–ಕಿವುಡರಾಗಿದ್ದಾರೆ. ಈ ಸಮಸ್ಯೆಯುಳ್ಳವರು ಪಾದ್ರಿಯಾಗಿ ಪ್ರತಿಜ್ಞೆ ಸ್ವೀಕರಿಸಿರುವುದು ಭಾರತದಲ್ಲಿ ಕ್ಯಾಥೋಲಿಕ್‌ ಚರ್ಚ್‌ನ ಇತಿಹಾಸದಲ್ಲೇ ಪ್ರಥಮ ಎಂದು ಹೇಳಲಾಗಿದೆ. ಥಾಮಸ್‌ ಮತ್ತು ರೋಸಿ ದಂಪತಿಯ ಪುತ್ರನಾದ ಇವರು ಮುಂಬೈನಲ್ಲಿ ಪದವಿ ಶಿಕ್ಷಣ ಪೂರೈಸಿದರು. ಈಗ ಪಾದ್ರಿಯಾಗುವ ಮೂಲಕ ಈ ಸ್ಥಾನಕ್ಕೇರಿದ, ಪ್ರಥಮ ಕಿವುಡ ಮತ್ತು ಮೂಕ ವ್ಯಕ್ತಿ ಎಂಬ ಹಿರಿಮೆಗೂ ಅವರು ಪಾತ್ರರಾಗಿದ್ದಾರೆ. 38 ವರ್ಷದ ಥೆರ್ಮಾಡೊಮ್‌, ಕಿವುಡ ಅಭ್ಯರ್ಥಿಗಳಿಗಾಗಿಯೇ ಅಮೆರಿಕದಲ್ಲಿರುವ ಡಾಮಿನಿಕನ್ ಮಿಷನರಿಯಲ್ಲಿ ತರ್ಕಶಾಸ್ತ್ರ ಅಧ್ಯಯನ ಮಾಡಿದ್ದಾರೆ. ಬಳಿಕ ತಮಿಳುನಾಡಿನ ಹೊಲಿ ಕ್ರಾಸ್‌ ನೊವಿಷಿಯೇಟ್‌ನಲ್ಲಿ ಧರ್ಮಾಧಿಕಾರಿಯಾಗಿದ್ದರು. ಸಂಜ್ಞೆ ಭಾಷೆ ಮೂಲಕ ಅವರು ಪ್ರಾರ್ಥನೆ ನಡೆಸಿಕೊಡುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.