ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ ಆರೋಪಿ ಅನೂಜ್ ಸಾವು: ತನಿಖೆಗೆ ಮನವಿ ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ನಂತರ ಪೊಲೀಸ್ ಕಸ್ಟಡಿಯಲ್ಲೇ ಮೃತಪಟ್ಟ ಅನುಜ್ ಥಾಪನ್ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಅವರ ಕುಟುಂಬದವರು ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಲಾಕಪ್‌ನಲ್ಲೇ ಥಾಪನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರೆ, ಆತನ ತಾಯಿ ರೀಟಾ ದೇವಿ ಅವರು ‘ನನ್ನ ಮಗನನ್ನು ಕೊಲ್ಲಲಾಗಿದೆ’ ಎಂದು ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ‘ನನ್ನ ಮಗನ ಸಾವಿನ ಬಗ್ಗೆ ತನಿಖೆ ನಡೆಸಲು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡುವಂತೆ’ ಅವರು ಅರ್ಜಿಯಲ್ಲಿ ಕೋರಿದ್ದಾರೆ. ‘ಥಾಪನ್‌ಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ’ ಎಂದು ದೂರಿರುವ ರೀಟಾ, ‘ಪೊಲೀಸ್ ಠಾಣೆಯ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಹಸ್ತಾಂತರಿಸುವಂತೆ ಹಾಗೂ ಗುಂಡಿನ ದಾಳಿಯ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳ ಕರೆಗಳ ದತ್ತಾಂಶ ದಾಖಲೆಗಳನ್ನು ಸಂರಕ್ಷಿಸುವಂತೆ’ ಮನವಿ ಮಾಡಿದ್ದು, ‘ಹೊಸದಾಗಿ ಮರಣೋತ್ತರ ಪರೀಕ್ಷೆಗೆ ನಿರ್ದೇಶನ ನೀಡಬೇಕು’ ಎಂದು ಕೋರಿದ್ದಾರೆ. ಗುಂಡಿನ ದಾಳಿಗೆ ಬಂದೂಕು ಮತ್ತು ಗುಂಡುಗಳನ್ನು ಸರಬರಾಜು ಮಾಡಿದ ಆರೋಪದ ಮೇಲೆ ಥಾಪನ್ ಅವರನ್ನು ಏ.26ರಂದು ಪಂಜಾಬ್‌ನಲ್ಲಿ ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದ ಈತ ಲಾಕಪ್‌ನ ಶೌಚಾಲಯದಲ್ಲಿ ಮೇ 1ರಂದು ಶವವಾಗಿ ಪತ್ತೆಯಾಗಿದ್ದ. - ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.