ತಮಿಳುನಾಡು–ಶ್ರೀಲಂಕಾ ನಡುವೆ ಹಡಗು ಸೇವೆ ಪುನಾರಾರಂಭ ಕೊಲಂಬೊ: ಭಾರತದ ನಾಗಪಟ್ಟಣಂ ಮತ್ತು ಶ್ರೀಲಂಕಾದ ಜಾಫ್ನಾ ಜಿಲ್ಲೆಯ ಕಾಂಕೆಸಂತುರೈ (ಕೆಕೆಎಸ್) ನಗರದ ನಡುವೆ ಪ್ರಯಾಣಿಕರಿಗೆ ದೋಣಿ ಸೇವೆಯು ಮೇ 13ರಿಂದ ಪುನರಾರಂಭಗೊಳ್ಳಲಿದೆ ಎಂದು ಭಾರತೀಯ ಹೈಕಮಿಷನ್ ಸೋಮವಾರ ತಿಳಿಸಿದೆ. 40 ವರ್ಷದ ನಂತರ, ಕಳೆದ ಅಕ್ಟೋಬರ್‌ನಲ್ಲಿ ಪ್ರಾರಂಭಿಸಿದ್ದ ದೋಣಿ ಸೇವೆಯು ಹವಾಮಾನ ವೈಪರೀತ್ಯದಿಂದ ಸ್ಥಗಿತಗೊಂಡಿತ್ತು. ದೋಣಿ ಸೇವೆಯನ್ನು ಮತ್ತೆ ಪ್ರಾರಂಭಿಸುತ್ತಿರುವುದು, ಭಾರತ ಸರ್ಕಾರದ ಜನಕೇಂದ್ರಿತ ನೀತಿಯ ದೃಢೀಕರಣವಾಗಿದೆ ಎಂದು ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ. ಕಾಂಕೆಸಂತುರೈ ಬಂದರನ್ನು ಪುನಶ್ಚೇತನಗೊಳಿಸಲು ಯೋಜನಾ ವೆಚ್ಚವಾದ ₹531 ಕೋಟಿಯನ್ನು ಭಾರತವು ಶ್ರೀಲಂಕಾಕ್ಕೆ ನೀಡಿದೆ. ಶ್ರೀಲಂಕಾದ ಕಾಂಕೆಸಂತುರೈ ಬಂದರು (ಕೆಕೆಎಸ್) ಸುಮಾರು 16 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಇದು ಪಾಂಡಿಚೇರಿಯ ಕರೈಕಲ್ ಬಂದರಿನಿಂದ 104 ಕಿಲೋಮೀಟರ್ ದೂರದಲ್ಲಿದೆ. ತಮಿಳುನಾಡಿನ ನಾಗಪಟ್ಟಣಂನಿಂದ ಕಾಂಕೆಸಂತುರೈ ಬಂದರಿಗೆ ಸಂಪರ್ಕ ಕಲ್ಪಿಸುವ ಪ್ರಯಾಣಿಕ ದೋಣಿಯು ಮೂರೂವರೆ ಗಂಟೆಗಳಲ್ಲಿ 111 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.