ಕಂಗನಾ ರನೌತ್‌ಗೆ ಮಾನಸಿಕ ಸಮಸ್ಯೆ: ಕಾಂಗ್ರೆಸ್ ನಾಯಕ ರಾಕೇಶ್ ಕುಮಾರ್ ಮಂಡಿ (ಹಿಮಾಚಲ ಪ್ರದೇಶ): ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌ ನಾಯಕ ರಾಕೇಶ್ ಕುಮಾರ್ ಸಿಂಗ್‌, ‘ಸಹಜವಾಗಿರುವವರು ಆಧಾರರಹಿತ ಆರೋಪ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕಂಗನಾ ಅವರು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಾರೆ ಹೀಗಾಗಿ ಆಧಾರರಹಿತ ಹೇಳಿಕೆ ನೀಡುತ್ತಿದ್ದಾರೆ’ ಎಂದು ಹೇಳಿದ್ದಾರೆ. ಕಂಗನಾ ಅವರನ್ನು ಮನೋವೈದ್ಯರೊಂದಿಗೆ ಪರೀಕ್ಷೆ ಮಾಡಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಲ್ಲಿ ರಾಕೇಶ್ ಕುಮಾರ್ ಮನವಿ ಮಾಡಿದ್ದಾರೆ. ‘ಇತಿಹಾಸ ಹಾಗೂ ರಾಜಕೀಯದ ಬಗ್ಗೆ ಕಡಿಮೆ ಮಾಹಿತಿ ಇರುವ ಕಂಗನಾ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಸಹಜವಾಗಿರುವವರು ಈ ರೀತಿಯ ಹೇಳಿಕೆ ನೀಡಲು ಸಾಧ್ಯವಿಲ್ಲ. ಬಿಜೆಪಿ ನಾಯಕರು ಕಂಗನಾಗೆ ಸ್ವಲ್ಪ ಇತಿಹಾಸದ ಬಗ್ಗೆ ಹೇಳಿ ಕೊಡಬೇಕು’ ಎಂದು ನುಡಿದಿದ್ದಾರೆ. ಸುಭಾಷ್‌ಚಂದ್ರ ಬೋಸ್‌ ಅವರು ದೇಶದ ಮೊದಲ ಪ್ರಧಾನಿ ಎಂದು ಹೇಳಿರುವ ಕಂಗನಾ ಅವರ ವಿಡಿಯೊವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ ಅವರು, ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಎಂದು ಎರಡನೇ ತರಗತಿಯ ವಿದ್ಯಾರ್ಥಿಗೂ ತಿಳಿದಿದೆ ಎಂದು ಕುಟುಕಿದ್ದಾರೆ. ರೈತರ ಹೋರಾಟದ ವೇಳೆ ಕಂಗನಾ ಅವರು ರೈತ ವಿರೋಧಿ ಹೇಳಿಕೆಯನ್ನೂ ನೀಡಿದ್ದರು ಎಂದು ಆರೋಪಿಸಿರುವ ರಾಕೇಶ್, ರೈತರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಕೇಶ್‌ ಕುಮಾರ್ ಮಂಡಿ ಹಾಗೂ ಜೋಗಿಂದರ್‌ನಗರ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.