ಪ್ರಧಾನಿಯ ಮಾದಿಗ ಒಳಮೀಸಲಾತಿ ಭರವಸೆ ಸುಳ್ಳೇ?: ಕಾಂಗ್ರೆಸ್ ನವದೆಹಲಿ: ಮಾದಿಗ ಸಮುದಾಯಕ್ಕೆ ಒಳಮೀಸಲಾತಿಯ ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ ಸಮೀಕ್ಷೆಯ ಬಗ್ಗೆ ತಮ್ಮ ‌ನಿಲುವನ್ನು ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ ಬುಧವಾರ ಪ್ರಶ್ನಿಸಿದೆ. ಪ್ರಧಾನಿಯ ಇತರ ‘ಜುಮ್ಲಾ’ಗಳಂತೆ ಈ ಭರವಸೆಯೂ ಒಂದು ಸುಳ್ಳೇ ಎಂದು ಪಕ್ಷ ಅಚ್ಚರಿ ವ್ಯಕ್ತಪಡಿಸಿದೆ. ತೆಲಂಗಾಣದಲ್ಲಿ ಮೋದಿ ಚುನಾವಣಾ ಪ್ರಚಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್‌’ನಲ್ಲಿ ಪ್ರಧಾನಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ‘ತೆಲಂಗಾಣದಲ್ಲಿರುವ ಮೋದಿ ಅವರಿಗೆ ಇಂದಿನ ಪ್ರಶ್ನೆಗಳು: ಕಾಜೀಪೇಟೆಯಲ್ಲಿ ರೈಲು ಕೋಚ್ ಕಾರ್ಖಾನೆ ಎಲ್ಲಿ? ಬಯ್ಯಾರಾಂ ಉಕ್ಕಿನ ಘಟಕ ಮತ್ತು ಐಟಿಐಆರ್ ಸಾಕಾರಗೊಳಿಸುವಲ್ಲಿ ಮೋದಿ ಅವರು ವಿಫಲವಾಗಿದ್ದೇಕೆ? ಜಾತಿ ಸಮೀಕ್ಷೆ ನಡೆಸದೇ ಮಾದಿಗರಿಗೆ ಒಳಮೀಸಲಾತಿ ನೀಡುತ್ತೇವೆ ಎನ್ನುವುದು ಒಂದು ‘ಜುಮ್ಲಾ’ ಹೌದೆ?’ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ‘ಕಾಂಗ್ರೆಸ್ ‘ನ್ಯಾಯ ಪತ್ರ’ವು ರಾಷ್ಟ್ರೀಯ ಮಟ್ಟದಲ್ಲಿ ಜಾತಿ ಸಮೀಕ್ಷೆ ನಡೆಸಲು ಬದ್ಧವಾಗಿದ್ದು, ತೆಲಂಗಾಣದ ಕಾಂಗ್ರೆಸ್ ಸರ್ಕಾರವು ಈಗಾಗಲೇ ರಾಜ್ಯ ಮಟ್ಟದ ಸಮೀಕ್ಷೆಗೆ ಸಿದ್ಧತೆ ಆರಂಭಿಸಿದೆ’ ಎಂದು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.