ರಷ್ಯಾದಲ್ಲಿ ಉದ್ಯೋಗದ ಭರವಸೆ ನೀಡಿ ವಂಚನೆ :ನಾಲ್ವರ ಬಂಧನ ನವದೆಹಲಿ: ಆಕರ್ಷಕ ವೇತನದ ಉದ್ಯೋಗದ ಆಮಿಷ ಒಡ್ಡಿ ಭಾರತದ ಯುವಕರನ್ನು ರಷ್ಯಾಕ್ಕೆ ಕರೆದೊಯ್ದು ಅಲ್ಲಿನ ಸೇನೆಗೆ ಸೇರ್ಪಡೆ ಗೊಳಿಸಿರುವ ಪ್ರಕರಣದ ಜೊತೆ ನಂಟಿರುವ ಮಾನವ ಕಳ್ಳಸಾಗಣೆಗೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ. ಒಬ್ಬ ಭಾಷಾಂತರಕಾರ, ವಿಮಾನ ಟಿಕೆಟ್‌ ಕಾಯ್ದಿರಿಸಿ ವೀಸಾ ಪಡೆಯಲು ನೆರವು ನೀಡುತ್ತಿದ್ದ ವ್ಯಕ್ತಿ ಹಾಗೂ ಇಬ್ಬರು ನೇಮಕ ಮಾಡಿಕೊಳ್ಳುವವರು ಸೇರಿದಂತೆ ಕೇರಳ ಮತ್ತು ತಮಿಳುನಾಡಿನಲ್ಲಿ ಒಟ್ಟು ನಾಲ್ವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಸಿಬಿಐ ಹೇಳಿದೆ. ‘ಮಾನವ ಕಳ್ಳಸಾಗಣೆಯ ಈ ಅಂತರರಾಷ್ಟ್ರೀಯ ಜಾಲದ ಭಾಗವಾಗಿರುವ ಇತರ ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದೆ’ ಎಂದೂ ತಿಳಿಸಿದೆ. ‘ಈ ವಿಷಯ ಕುರಿತು ರಷ್ಯಾ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಪ್ರಕರಣದ ಗಂಭೀರತೆಯನ್ನು ವಿವರಿಸಲಾಗಿದೆ’ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ‘ಈ ಬೆಳವಣಿಗೆ ಕುರಿತಂತೆ ರಷ್ಯಾ ಅಧಿಕಾರಿಗಳು ಸಂಸ್ಥೆಗೆ ಪ್ರತಿಕ್ರಿಯಿಸಿಲ್ಲ’ ಎಂದು ರಾಯಿಟರ್ಸ್ ಹೇಳಿದೆ. ರಷ್ಯಾದಲ್ಲಿ ಉದ್ಯೋಗ ಆಮಿಷ ಒಡ್ಡಿ ವಂಚಿಸುತ್ತಿರುವ ಜಾಲದ ಕುರಿತು ಶ್ರೀಲಂಕಾ ಹಾಗೂ ನೇಪಾಳ ಸಹ ತಮ್ಮ ನಾಗರಿಕರಿಗೆ ಎಚ್ಚರಿಕೆ ನೀಡಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.